ಸಾರಾಂಶ
ಉಡುಪಿ : ಜಿಲ್ಲೆಯಲ್ಲಿ ಒಟ್ಟು ಎಷ್ಟು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಸ್ಪಷ್ಟ ಮಾಹಿತಿ ಜಿಲ್ಲಾಡಳಿತದ ಬಳಿಯಿಲ್ಲ. ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.ಅವರು ಗುರುವಾರ ತಮ್ಮ ಕಚೇರಿಯಲ್ಲಿ ಕರೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ಹಿಂದಿನ ಮಾಹಿತಿಯ ಆಧಾರದಲ್ಲಿ 120 ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, 25 ಸಂಸ್ಥೆಯ ಪ್ರಮುಖರು ಮಾತ್ರ ಸಭೆಗೆ ಹಾಜರಾಗಿದ್ದರು. ಅವರೆಲ್ಲರಿಗೂ ಆರ್ಬಿಐ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು.ಈ ವರ್ಷ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ವಸೂಲಿಗೆ ಕಿರುಕುಳ ಅಥವಾ ಇತರೆ ದೂರುಗಳು ದಾಖಲಾಗಿಲ್ಲ.
ಸಾಲ ನೀಡುವವರು ಹಾಗೂ ಮುಖ್ಯವಾಗಿ ಪಡೆಯುವವರು ಆರ್ಬಿಐ ನಿರ್ದೇಶವನ್ನು ಅರಿತುಕೊಳ್ಳಿ ಎಂದವರು ಸಲಹೆ ಮಾಡಿದರು.ಎಸ್ಪಿ ಡಾ.ಅರುಣ್ ಮಾತನಾಡಿ, ಕಳೆದ ವರ್ಷ ಮೈಕ್ರೋ ಫೈನಾನ್ಸ್ ಸಂಸ್ಥೆಯ ವಿರುದ್ಧ 17 ದೂರು ಅರ್ಜಿಗಳು ಬಂದಿದ್ದು, 2 ಎಫ್ಐಆರ್ ದಾಖಲಾಗಿದ್ದವು. ಯಾವುದೇ ನೋಂದಣಿ ಮಾಡಿಕೊಳ್ಳದೆ ಬಡ್ಡಿಗೆ ಹಣ ನೀಡುತ್ತಿರುವ ಯಾವುದೇ ಸಂಸ್ಥೆಯ ವಿರುದ್ಧ ನೇರವಾಗಿ ದೂರು ನೀಡಿ, ಅವರ ಮೇಲೆ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ಸಹಾಯಕ ಕಮೀಷನರ್ ಮಹೇಶ್ಚಂದ್ರ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ವಿವಿಧ ಮೈಕ್ರೋಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು
-0820-2574802ಗೆ ಕರೆ ಮಾಡಿ
ಸ್ಥಳೀಯವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಯಾರಾದರೂ ಕಿರುಕುಳ ಅನುಭವಿಸುತ್ತಿದ್ದರೆ ತಕ್ಷಣ ದೂರನ್ನು ದಾಖಲಿಸಬಹುದು. ದೂರು ದಾಖಲಿಸಲು ಜಿಲ್ಲಾಡಳಿತದ 0820-2574802 ನಂಬರ್ ಕರೆ ಮಾಡಬಹುದು. ಈ ಸಂಖ್ಯೆಯು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾರ್ಯನಿರ್ವಹಿಸುತ್ತದೆ. ತಹಸೀಲ್ದಾರ್, ಪೋಲಿಸ್ ಠಾಣೆ, ತಾ.ಪಂ. ಇಓಗಳಿಗೂ ದೂರನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.