ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಚಿಮ್ಮಡ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಹಲವು ಸದಸ್ಯರಿಂದ ಜಮಖಂಡಿ ಉಪ ವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ನ.30ರಂದು ಚಿಮ್ಮಡ ಗ್ರಾಪಂ ಕಾರ್ಯಾಲಯದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದೆ.28 ಸದಸ್ಯ ಬಲದ ಇಲ್ಲಿನ ಗ್ರಾಪಂನಲ್ಲಿ ಕಳೆದ 15 ಹಿಂದೆ ಬಿಜೆಪಿ ಬೆಂಬಲಿತ 19 ಸದಸ್ಯರ ಬೆಂಬಲದೊಂದಿಗೆ ಮಾಲಾ ಅಶೋಕ ಮೋಟಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಾಲಾ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. 19/9 ಪರ ವಿರೋಧ ಬಲವಿರುವ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 19 ಸದಸ್ಯರು ಅವಿಸ್ವಾಸ ನಿರ್ಣಯ ಮಂಡಿಸಲು ಮುಂದಾಗಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಮೋಹನ ಬಿರಡಿಕರರಿಗೆ ಮನವಿ ಸಲ್ಲಿಸಲಾಗಿದೆ. ಅವರು ವಿಶ್ವಾಸ ಮತಯಾಚನೆಗಾಗಿ ಗ್ರಾಪಂ ಕಾರ್ಯಾಲಯದಲ್ಲಿ ಇಂದು ಸರ್ವ ಸದಸ್ಯರ ಸಭೆ ಕರೆಯಲಾಗಿದ್ದು ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.
ಪ್ರವಾಸ ಭಾಗ್ಯ:ಈ ನಡುವೆ ಎಲ್ಲ ಸದಸ್ಯರನ್ನು ಒಗ್ಗಟ್ಟಿನಿಂದ ಇಡುವ ಕಾರಣ ಕಳೆದ ಮೂರು ದಿನಗಳಿಂದ ಹಲವು ಸದಸ್ಯರನ್ನು ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಅವಿಶ್ವಾಸ ಮಂಡನೆಯ ದಿನದಂದು ಎಲ್ಲ ಸದಸ್ಯರು ಚಿಮ್ಮಡ ಗ್ರಾಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಸದಸ್ಯರ ಮುಂದಿನ ನಡೆ ಕುತೂಹಲಕಾರಿಯಾಗಿದೆ. ಚಿಮ್ಮಡ ಗ್ರಾಪಂ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಪಂ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಯಾಗಿದ್ದು, ಎರಡೂ ಬಣಗಳು ತೆರೆಯ ಹಿಂದೆ ತೀವ್ರ ಕಸರತ್ತು ನಡೆಸುತ್ತಿದ್ದು ವಿಶ್ವಾಸಮತ ಏನಾಗುವುದೋ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.