ಮಾದಾವರದಿಂದ - ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ. ಮೆಟ್ರೋ ವಿಸ್ತರಣೆ ಯೋಜನೆ ಸ್ವಾಗತಿಸುತ್ತೇನೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಮಾದಾವರದಿಂದ - ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ. ಮೆಟ್ರೋ ವಿಸ್ತರಣೆ ಯೋಜನೆ ಸ್ವಾಗತಿಸುತ್ತೇನೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಅವಧಿಯಲ್ಲಿ ಶ್ರಮಿಸಿದ್ದರೂ ಈ ಹಂತಕ್ಕೆ ಹೋಗಿರಲಿಲ್ಲ. ಈಗ ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸರ್ಕಾರದ ವಿಶೇಷ ಆಸಕ್ತಿ ಮೆಚ್ಚುವಂತದ್ದು. ಭವಿಷ್ಯದ ದೃಷ್ಟಿಯಿಂದ ವಸಂತನರಸಾಪುರದವರೆಗೂ ವಿಸ್ತರಣೆ ಮಾಡುವುದು ಸೂಕ್ತವಾಗಿದೆ ಎಂದರು. ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯರವರನ್ನು ತುಮಕೂರಿಗೆ ಆಹ್ವಾನಿಸಿ, ಒಂದು ಸಂವಾದ ನಡೆಸುವುದು ಅಗತ್ಯವಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ,ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮತ್ತು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶ್ರಮಿಸುವ ಭರವಸೆ ಇದೆ ಎಂದಿದ್ದಾರೆ.

ಬೆಂಗಳೂರಿನ 2 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ನನ್ನ ಅವಧಿಯಲ್ಲಿ ಆರಂಭಿಸಲಾಗಿತ್ತು. ತುಮಕೂರು ಏರ್ ಪೋರ್ಟ್ ಸ್ಥಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.ಮೇಕೆ ದಾಟು ನ್ಯಾಯಾಲಯದ ತೀರ್ಪು ಸ್ವಾಗತವಾಗಿದೆ. 1948ರಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಆರಂಭಿಸಿದ್ದರೂ, ಈಗ ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರಕ್ಕೆ ಆತ್ಮ ವಿಶ್ವಾಸ ಹೆಚ್ಚಿಸಿದೆ. ಸರ್ಕಾರ ಶೀಘ್ರವಾಗಿ ವರದಿ ಸಲ್ಲಿಸಿದ ನಂತರ ಪಕ್ಷಾತೀತವಾಗಿ ಪ್ರಧಾನಿ ನರೇಂದ್ರಮೋದಿ ಅವರ ಬಳಿ ನಿಯೋಗ ಹೋಗಿ ಮನವಿ ಮಾಡುವುದು ಅಗತ್ಯವಾಗಿದೆ. ಯೋಜನೆಗೆ ಶ್ರಮಿಸಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ, ರಾಜ್ಯದ ಎಲ್ಲಾ ಅವಧಿಯ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ ಸಚಿವರುಗಳಿಗೂ, ತಜ್ಞರುಗಳಿಗೂ, ಅಧಿಕಾರಿಗಳಿಗೂ. ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬರೆದಿರುವ ನೀರಿನ ಹೆಜ್ಜೆ ವಿವಾದ ಒಪ್ಪಂದ- ತೀರ್ಪು, ಪುಸ್ತಕದಲ್ಲಿನ ಬರಡು ಇಳೆಗೆ ನೀರುಣಿಸುವಲಿರುವ ಎತ್ತಿನಹೊಳೆ ಯೋಜನೆಯಲ್ಲಿ ದಿ. ಜಿ.ಎಸ್.ಪರಮಶಿವಯ್ಯ ಶ್ರಮವನ್ನು ಉಲ್ಲೇಖ ಮಾಡಿರುವುದು ನಿಜಕ್ಕೂ ಅಭಿನಂದನೀಯ. ವಿವಿಧ ತಜ್ಞರುಗಳೊಂದಿಗೆ ಸಮಾಲೋಚನೆ ನಡೆಸಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಘೋಷಣೆಯೊಂದಿಗೆ, ಕರ್ನಾಟಕ ಸಮಗ್ರ ನೀರಾವರಿ ಯೋಜನೆಗಳ ವಸ್ತು ನಿಷ್ಠ ವರದಿಯನ್ನು ಶೀಘ್ರವಾಗಿ ಹೊರತರಲಾಗುವುದು ಎಂದರು. ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಹಾಗೂ ಆಸಕ್ತ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯಲು ಉದ್ದೇಶಿಸಲಾಗಿದೆ. ಕರ್ನಾಟಕ ರಾಜ್ಯದ್ಯಾಂತ, 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ತಲಾ 5 ರಂತೆ ರಚನೆಯಾಗುತ್ತಿರುವ 1120 ಕಳೆ-ಬೆಳೆ ನಾಲೇಡ್ ಬ್ಯಾಂಕ್‌ಗಳ/ಕೃಷಿ ಆಶ್ರಮಗಳ, ಪ್ರಗತಿಪರ ರೈತ ತಜ್ಞರ ಸಹಭಾಗಿತ್ವದೊಂದಿಗೆ, ರಾಜ್ಯದ ಮೂಲೆ ಮೂಲೆಗಳಲ್ಲಿರುವ ನೀರಾವರಿ ತಜ್ಞರು, ನೀರಾವರಿ ಹೋರಾಟಗಾರರು, ನೀರಾವರಿ ಅಧ್ಯಯನ ಸಂಸ್ಥೆಗಳು, 28 ಲೋಕಸಭಾ, 14 ರಾಜ್ಯಸಭಾ, 225 ವಿಧಾನ ಸಭಾ, 75 ವಿಧಾನಪರಿಷತ್ ಮತ್ತು 2 ದೆಹಲಿ ವಿಶೇಷ ಜನಪ್ರತಿನಿಧಿಯವರು ಸೇರಿದಂತೆ 344 ಜನರ ಅಭಿಪ್ರಾಯಗಳನ್ನು ಸಹ ಪಡೆಯಲಾಗುವುದು ಎಂದರು. ನಾನು 1984ರಲ್ಲಿ ಲೋಕಸಭೆಗೆ ಪಾದಾರ್ಪಣೆ ಮಾಡಿದ ಆರಂಭದಲ್ಲಿ ಲೋಕಸಭೆ ಆವರಣದಲ್ಲಿ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಮಾಡಲು ಶ್ರಮಿಸಿದ್ದೆ. 5 ಬಾರಿ ಲೋಕಸಭಾ ಸದಸ್ಯನಾಗಿ ಕೊನೆಯಲ್ಲಿ, ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳೆರವರಿಗೆ, ಲೋಕೊಪಯೋಗಿ ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ದೆಹಲಿ ರೆಸಿಡೆಂಟ್ ಕಮೀಷನರ್ ರವರಿಗೆ ಮನವಿ ಸಲ್ಲಿಸಿದ್ದೆ. ಜಮೀನು ಮಂಜೂರು ಮಾಡಲು ಸಹಕರಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲರಿಗೂ ಅಭಿನಂದನೆಗಳು. 2023 ರಿಂದ ಇದೂವರೆಗೂ ನಿರಂತರವಾಗಿ ಕಡತದ ಅನುಸರಣೆ ಮಾಡಿರುವ ಕುಂದರನಹಳ್ಳಿ ರಮೇಶ್ ಕೆಲಸವೂ ಮೆಚ್ಚುವಂತದ್ದು. ಶೀಘ್ರವಾಗಿ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಲು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್ ಇದ್ದರು.