ಸಾರಾಂಶ
ಹರಪನಹಳ್ಳಿ: ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ, ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖರನ್ನು ಒಟ್ಟಿಗೆ ಸೇರಿಸಿ ಶೀಘ್ರದಲ್ಲೇ ಸಭೆ ಮಾಡುತ್ತೇನೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣವಿದೆ ನಾನು ಈಗಾಗಲೇ ಶಾಸಕಿ ಲತಾ ಮಲ್ಲಿಕಾರ್ಜುನ, ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್, ಎಂ.ಪಿ. ವೀಣಾ ಮಹಾಂತೇಶ, ಮಹಾಬಲ್ಲೇಶ್ವರ ಗೌಡ, ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಒಂದು ವೇಳೆ ನಾಯಕರಲ್ಲಿ ಗುಂಪುಗಾರಿಕೆ ಇದ್ದರೆ ಅದನ್ನು ಶೀಘ್ರ ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ಕುಮಾರ ಸ್ಪರ್ಧೆಯಿಂದ ಪಕ್ಷಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ವಾತಾವರಣ ಇದೆ. ಜನರು ಕೂಡ ಕಾಂಗ್ರೆಸ್ಗೆ ಮತ ಹಾಕುತ್ತಾರೆ. ಇದರಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕುಬೇರಪ್ಪ, ಮುಖಂಡರಾದ ಮಹಾಬಲ್ಲೇಶ್ವರಗೌಡ, ಬಿ.ಕೆ. ಪ್ರಕಾಶ, ಹಡಗಲಿ ಐಗೋಳ ಚಿದಾನಂದ, ಆಲದಳ್ಳಿ ಷಣ್ಮುಖಪ್ಪ, ಕೋಡಿಹಳ್ಳಿ ಭೀಮಪ್ಪ, ವಸಂತಪ್ಪ, ಇಸ್ಮಾಯಿಲ್ ಎಲಿಗಾರ, ಹುಲಿಕಟ್ಟಿ ಚಂದ್ರಪ್ಪ, ರಾಮಪ್ಪ, ಬಾಣದ ಅಂಜಿನಪ್ಪ, ಕೋಟೆಪ್ಪ, ಗಣೇಶ್, ರಿಯಾಜ್ ಸೇರಿದಂತೆ ಇತರರು ಇದ್ದರು.