ಸಾರಾಂಶ
ಕೆಡಿಸಿಸಿ ಬ್ಯಾಂಕ್ನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆಗೂ ನಿರ್ದೇಶಕಿಯಾಗಲು ಅವಕಾಶ ಸಿಗದೇ ಇರುವುದರಿಂದ ಮಹಿಳಾ ಪ್ರಾತಿನಿಧ್ಯತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆಯೇ ಹೊರತು ಯಾವುದೇ ವ್ಯಕ್ತಿ ಅಥವಾ ಬಣದ ಪ್ರತಿನಿಧಿಯಾಗಿ ಅಲ್ಲ.
ಕನ್ನಡಪ್ರಭ ವಾರ್ತೆ ಶಿರಸಿ
ಕೆಡಿಸಿಸಿ ಬ್ಯಾಂಕ್ನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆಗೂ ನಿರ್ದೇಶಕಿಯಾಗಲು ಅವಕಾಶ ಸಿಗದೇ ಇರುವುದರಿಂದ ಮಹಿಳಾ ಪ್ರಾತಿನಿಧ್ಯತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆಯೇ ಹೊರತು ಯಾವುದೇ ವ್ಯಕ್ತಿ ಅಥವಾ ಬಣದ ಪ್ರತಿನಿಧಿಯಾಗಿ ಅಲ್ಲ ಎಂದು ಸಹಕಾರಿ ಸರಸ್ವತಿ ಎನ್. ರವಿ ಸ್ಪಷ್ಟಪಡಿಸಿದರು.ಗುರುವಾರ ನಗರದ ಸ್ಕೊಡ್ವೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ನಾನು ಬಣಗಳ ಪ್ರತಿನಿಧಿಯಾಗಿ ಸ್ಫರ್ಧಿಸಿದ್ದೇನೆ, ಸಂದರ್ಭ ನೋಡಿ ನಾಮಪತ್ರ ಹಿಂಪಡೆಯುತ್ತೇನೆ ಎಂದು ಸಹಕಾರಿ ಮತದಾರರಿಗೆ ತಪ್ಪು ಸಂದೇಶ ನೀಡುತ್ತಿರುವುದು, ಅನಾವಶ್ಯಕ ಅಪಪ್ರಚಾರ ಮಾಡುತ್ತಿರುವುದು ನನ್ನ ಸ್ಪರ್ಧೆ ಹತ್ತಿಕ್ಕುವ ಪ್ರಯತ್ನವಾಗಿರುತ್ತದೆ. ನಾನು ಮಹಿಳಾ ಪ್ರಾತಿನಿಧ್ಯ, ಎಲ್ಲ ಸಹಕಾರಿ ಸಂಘಗಳಿಗೂ ಸಮಾನ ಅವಕಾಶಗಳು ಸಿಗಬೇಕೆಂಬ ಸಾಮಾಜಿಕ ನ್ಯಾಯಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆಯೇ ಹೊರತು ಯಾರದೇ ಒತ್ತಡ ಅಥವಾ ಆಮಿಷಕ್ಕೆ ಒಳಗಾಗಿಲ್ಲ ಎಂದು ಹೇಳಿದರಲ್ಲದೇ, ಸ್ಪರ್ಧೆಯಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದರು.
ಚುನಾವಣೆಯಲ್ಲಿ ಯಾವುದೇ ಫಲಿತಾಂಶ ಬಂದರೂ ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ. ದಯವಿಟ್ಟು ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಳೆದ 15ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನ್ನ ಹೋರಾಟಕ್ಕೆ ಎಲ್ಲ ಸಹಕಾರಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಹೇಮಲತಾ ಚೌಗುಲೆ, ಗೀತಾ ಹಣಬರ್, ವೀಣಾ ಮೊಗೇರ, ಸರೋಜಾ ಗಂಗೊಳ್ಳಿ, ಸ್ವಾತಿ ಶೆಟ್ಟಿ, ಲಲಿತಾ ಹೆಗಡೆ, ಭಾಗೀರತಿ ನಾಯ್ಕ, ರೇಖಾ ನಾಯ್ಕ, ಮಾನಸ ಹೆಗಡೆ ಉಪಸ್ಥಿತರಿದ್ದರು.