ಸಾರಾಂಶ
ಮುಂಡರಗಿ: ತಾಯಿ ಎಂದರೆ ಅವಳೊಬ್ಬ ತ್ಯಾಗಮಯ ಜೀವಿ. ತಾಯಿಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ಜಗತ್ತಿನಲ್ಲಿ ತಾಯಿ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ನಡೆದ ಅವ್ವನ ಕುರಿತು ವಿಶೇಷ ಉಪನ್ಯಾಸ, 1831ನೇ ಮಾಸಿಕ ಶಿವಾನುಭವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ, ಜೋಪಾನ ಮಾಡಿ, ಮನುಷ್ಯರನ್ನಾಗಿ ಮಾಡುವಲ್ಲಿ ತಾಯಿಯ ಪಾತ್ರ ಅತ್ಯಂತ ಹಿರಿದಾಗಿರುತ್ತದೆ. ಅಂತಹ ತಂದೆ-ತಾಯಿಯನ್ನು ಅವರ ಕೊನೆಗಾಲದಲ್ಲಿ ಜೋಪಾನ ಮಾಡದೇ ವೃದ್ಧಾಶ್ರಮಕ್ಕೆ ಕಳುಸುತ್ತಿರುವುದು ಬೇಸರದ ಸಂಗತಿ. ಅದಕ್ಕಾಗಿ ಇಂದಿನ ಮಕ್ಕಳಿಗೆ ನೀತಿ ಶಿಕ್ಷಣ ಬೋಧಿಸುವ ಅವಶ್ಯಕತೆ ಇದೆ ಎಂದು ಹೇಳಿದರು.ಉತ್ತರ ಕರ್ನಾಟಕದ ಮಠ-ಮಾನ್ಯಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಅನ್ನ ಮತ್ತು ಜ್ಞಾನ ದಾಸೋಹ ಮಾಡುವಲ್ಲಿ ಮಾದರಿಯಾಗಿವೆ. ಒಂದು ಸರ್ಕಾರ ಮಾಡುವಂತಹ ಕೆಲಸವನ್ನು ಈ ಮಠ-ಮಾನ್ಯಗಳು ಮಾಡುತ್ತಾ ಬಂದಿರುವುದರಿಂದ ಶಿಕ್ಷಣದಿಂದ ವಂಚಿತರಾಗುವ ಅನೇಕರು ಶಿಕ್ಷಣವಂತರಾಗಿದ್ದಾರೆ. ಈ ಮಠ-ಮಾನ್ಯಗಳ ಸ್ವಾಮೀಜಿ ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಿದೆ. ಆದರೆ ಸರ್ಕಾರ ಮಾತ್ರ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುತ್ತದೆ. ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಿರುವಾಗ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ? ಸರ್ಕಾರ ಖಾಲಿ ಇರುವ ಶಿಕ್ಷಕರ ಸ್ಥಾನಗಳನ್ನು ತಕ್ಷಣವೇ ಭರ್ತಿ ಮಾಡುವ ಮೂಲಕ ಶಿಕ್ಷಣಕ್ಕೆ ಬಲ ನೀಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಶಸ್ತಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಉತ್ತಮ ರೀತಿ ಕಾರ್ಯ ನಿರ್ವಹಿಸುವುದರೊಂದಿಗೆ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರ ಬಳಿಗೆ ಕೊಂಡೊಯ್ಯಲು ಪ್ರಯತ್ನಿಸಲಾಗುತ್ತಿದೆ ಎಂದರು. ಈ ವೇಳೆ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಡಿಡಿಪಿಐ ಆರ್.ಎಸ್. ಬುರಡಿ ಅವರು ಮೌಲ್ಯಶಿಕ್ಷಣದ ಅವಶ್ಯಕತೆ ಕುರಿತು ಮತ್ತು ಅವ್ವ ಸೇವಾ ಟ್ರಸ್ಟ್ ಗದಗ ಜಿಲ್ಲಾ ಸಂಚಾಲಕ ಡಾ. ಬಸವರಾಜ ಧಾರವಾಡ ಅವರು ಅವ್ವ ಕುರಿತು ಮಾತನಾಡಿದರು. ಬಿ.ಎಸ್. ನೇಮಗೌಡ್ರ, ಕಮಲಮ್ಮ ಹನುಮಂತಗೌಡ ಪಾಟೀಲ, ಎಸ್.ಆರ್. ಚಿಗರಿ, ಮಂಜುನಾಥ ಕುಸಗಲ್, ಜಾಫರ್ ಬಚೇರಿ, ಡಿ.ಟಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಶ್ರೀ ಜ.ಅ. ವಿದ್ಯಾ ಸಮಿತಿಯ 32ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಲಿಂಗರಾಜಗೌಡ ಪಾಟೀಲ, ಎಚ್.ಎಂ. ಫಡ್ನೇಶಿ, ಕರಬಸಪ್ಪ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಆರ್.ಎಲ್. ಪೊಲೀಸ್ಪಾಟೀಲ್, ವೀರನಗೌಡ ಗುಡದಪ್ಪನವರ, ದೇವಪ್ಪ ರಾಮೇನಹಳ್ಳಿ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಂ.ಎಚ್. ಪೂಜಾರ ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಸ್.ಎಸ್. ಮಠದ, ಆರ್.ಆರ್. ಇನಾಮದಾರ ಕಾರ್ಯಕ್ರಮ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು.