ಸಂಪುಟ ಪುನಾರಚನೆ ಕುರಿತುನಮಗೆ ಯಾರೂ ಹೇಳಿಲ್ಲ: ಪರಂ- ಕೆಲವರು ಅವರವರ ಅಭಿಪ್ರಾಯ ಹೇಳಿಕೊಳ್ತಿದ್ದಾರೆ

| Published : Oct 01 2025, 01:00 AM IST

ಸಂಪುಟ ಪುನಾರಚನೆ ಕುರಿತುನಮಗೆ ಯಾರೂ ಹೇಳಿಲ್ಲ: ಪರಂ- ಕೆಲವರು ಅವರವರ ಅಭಿಪ್ರಾಯ ಹೇಳಿಕೊಳ್ತಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ರಚಿಸಿದ ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಆಗಬೇಕು ಎಂದು ನಮಗೆ ಯಾರೂ ಹೇಳಿಲ್ಲ. ಹೈಕಮಾಂಡ್‌ನವರು ಕೂಡ ತಿಳಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಸರ್ಕಾರ ರಚಿಸಿದ ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಆಗಬೇಕು ಎಂದು ನಮಗೆ ಯಾರೂ ಹೇಳಿಲ್ಲ. ಹೈಕಮಾಂಡ್‌ನವರು ಕೂಡ ತಿಳಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಕುರಿತು ಕೆಲವರು ಅವರವರ ಅಭಿಪ್ರಾಯ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯವರಾಗಲೀ ಅಥವಾ ಪಕ್ಷದ ಅಧ್ಯಕ್ಷರಾಗಲೀ ನಮಗೆ ಇದರ ಬಗ್ಗೆ ಹೇಳಿಲ್ಲ. ಒಳಗೆ ಅವರು ಯಾವ ಹೊಂದಾಣಿಕೆಗೆ ಬಂದಿದ್ದಾರೋ ಗೊತ್ತಿಲ್ಲ ಎಂದರು.

ಧರ್ಮಸ್ಥಳ ಪ್ರಕರಣದಲ್ಲಿ ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಬೇಕು ಅಂತ ಎಸ್ಐಟಿಗೆ ತಿಳಿಸಿದ್ದೇವೆ. ಷಡ್ಯಂತ್ರ ಮಾಡಿದ ಆರೋಪ ಎದುರಿಸುವವರ ಬಂಧನಕ್ಕೆ ಕಾನೂನು ತೊಡಕುಗಳು ಏನೇನಿದೆಯೋ ಅದರ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್ಎಸ್‌ಎಲ್‌ ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಿ ವರದಿ ಕೊಡಲು ಎಸ್ಐಟಿಗೆ ಹೇಳಿದ್ದೇವೆ ಎಂದು ತಿಳಿಸಿದರು.

ಸರ್ಕಾರಿ‌ ನೌಕರರಿಗೆ ವಯೋಮಿತಿ ಸಡಿಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಒಂದು ಸಲಕ್ಕೆ ಅನ್ವಯ ಆಗುವಂತೆ 2027 ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತವಾಗಿ ವಯೋಮಿತಿ ಸಡಿಲಿಕೆ ಕೊಡಲು ಮುಂದಾಗಿದ್ದೇವೆ. ಸಿ ಆ್ಯಂಡ್‌ ಆರ್‌ ನಿಯಮಗಳಡಿ ಶಾಶ್ವತವಾಗಿ ಕಾನ್‌ಸ್ಟೇಬಲ್, ಪಿಎಸ್‌ಐ, ಎಸ್ಐ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಮಾಡ್ತೇವೆ. ಇದರ ಬಗ್ಗೆ ಪರಿಶೀಲನೆ ನಡೀತಿದೆ, ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಅಂತ ಮಾಹಿತಿ ತರಿಸಿಕೊಂಡಿದ್ದೇವೆ. ಸದ್ಯದಲ್ಲೇ ಪೊಲೀಸ್ ಹುದ್ದೆಗಳ ನೇಮಕಾತಿಗಳಿಗೆ ವಯೋಮಿತಿ ಸಡಿಲಿಕೆ ಕುರಿತು ಪ್ರಕಟ ಮಾಡುತ್ತೇವೆ ಎಂದರು.