ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ: ಡಿಕೆಸು

| Published : Nov 06 2025, 04:15 AM IST

ಸಾರಾಂಶ

ಹಾಲು ಮಾರಾಟದಿಂದಾಗುತ್ತಿರುವ ನಷ್ಟದ ಕುರಿತು ಕೆಎಂಎಫ್‌ಗೆ ಮನವಿ ಮಾಡಿದ್ದು, ಹಾಲಿನ ದರ ಏರಿಕೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಆದ್ರೆ ನಷ್ಟ ಬಗ್ಗೆ ಕೆಎಂಎಫ್‌ಗೆ ತಿಳಿಸಿದ್ದೇವೆ। ಪ್ರತಿ ಲೀ.ಹಾಲಿಗೆ 1.20 ರು.ವರೆಗೆ ನಷ್ಟ: ಸುರೇಶ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಲು ಮಾರಾಟದಿಂದಾಗುತ್ತಿರುವ ನಷ್ಟದ ಕುರಿತು ಕೆಎಂಎಫ್‌ಗೆ ಮನವಿ ಮಾಡಿದ್ದು, ಹಾಲಿನ ದರ ಏರಿಕೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲಿನ ದರ ಏರಿಕೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ, ಹಾಲು ಮಾರಾಟದಿಂದ ಬೆಂಗಳೂರು ಹಾಲು ಒಕ್ಕೂಟಕ್ಕಾಗುತ್ತಿರುವ ನಷ್ಟ ಕುರಿತು ತಿಳಿಸಿದ್ದೇವೆ. ನಮಗೆ ಪ್ರತಿ ಲೀಟರ್‌ ಹಾಲಿಗೆ 20 ಪೈಸೆಯಿಂದ 1.20 ರು.ವರೆಗೆ ನಷ್ಟವಾಗುತ್ತಿದೆ. ಬಮೂಲ್‌ನಲ್ಲಿ 5 ಪ್ರಕಾರದ ಹಾಲು ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಒಂದೊಂದು ರೀತಿಯ ಹಾಲಿನಿಂದ ಒಂದೊಂದು ರೀತಿ ನಷ್ಟವಾಗುತ್ತಿದೆ. ಅರ್ಧ ಲೀ. ಹಾಲು ಮಾರಾಟದಿಂದ ಲಾಭವಾಗುತ್ತಿದ್ದರೆ, 1 ಲೀ.ಗಿಂತ ಹೆಚ್ಚಿನ ಪ್ರಮಾಣ ಹಾಲು ಮಾರಾಟದಿಂದ ನಷ್ಟವಾಗುತ್ತಿದೆ ಎಂದರು.

ಅರ್ಧ ಲೀ. ಹಾಲಿಗೆ 26 ರು.ಗಳಿದ್ದರೆ, 1 ಲೀ. ಹಾಲಿಗೆ 48 ರು.ಗಳಿವೆ. ಈ ಹಿಂದೆ 1 ಲೀ. ಹಾಲಿನ ದರ ಹೆಚ್ಚಳ ವೇಳೆ ನಮ್ಮ ಅಧಿಕಾರಿಗಳು ಸರಿಯಾಗಿ ಲೆಕ್ಕ ಹಾಕದೆ, ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದ ಕಾರಣ ನಷ್ಟ ಉಂಟಾಗುವಂತಾಗಿದೆ. ಈ ಬಗ್ಗೆ ಕೆಎಂಎಫ್‌ ಗಮನಕ್ಕೆ ತಂದಿದ್ದು, ದರ ಹೆಚ್ಚಳ ಮಾಡಿ ಎಂದು ಪ್ರಸ್ತಾವನೆ ನೀಡಿಲ್ಲ ಎಂದು ಹೇಳಿದರು.