- ಸಮಾಧಾನದಿಂದ ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ಮನವಿ

- - -

ಹರಿಹರ: ಪಂಚಮಸಾಲಿ ಸಮಾಜದ ಹಿತದೃಷ್ಟಿಯಿಂದ ಹರಪೀಠಕ್ಕೆ ಸಂಬಂಧಿಸಿದ ಲೆಕ್ಕಕೊಡಿ ಎಂದು ಬೀದಿಯಲ್ಲಿ ಹೋರಾಟ ಮಾಡುವುದಕ್ಕಿಂತ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಹಿರಿಯರಾದ ಹೊಳೆಸಿರಿಗೆರಿಯ ಎನ್.ಜಿ. ನಾಗನಗೌಡ್ರು ಅಭಿಪ್ರಾಯಪಟ್ಟಿದ್ದಾರೆ.

ಪಂಚಮಸಾಲಿ ಪೀಠದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಸಮಾಜದಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಮಠದ ಆಡಳಿತ ನಡೆಸುವವರು ಅನೇಕ ಸವಾಲುಗಳನ್ನು ಎದುರಿಸಿ ಇಡೀ ಸಮುದಾಯ ತಲೆ ಎತ್ತಿ ನಿಲ್ಲುವಂತಹ ಮಠವನ್ನು ನಿರ್ಮಿಸಿರುವುದು ಮರೆಯಬಾರದು. ಇಂತಹ ಸಂದರ್ಭದಲ್ಲಿ ಕೆಲವರು ತಪ್ಪು ತಿಳಿವಳಿಕೆಯಿಂದ ಬೀದಿಯಲ್ಲಿ ಲೆಕ್ಕ ಕೊಡಿ ಚಳವಳಿ ನಡೆಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ಪರ- ವಿರೋಧ ಚರ್ಚೆಗಳು ಸಾಮಾನ್ಯವಾದರೂ, ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದು ಸಾಧ್ಯವಿಲ್ಲ ಎಂಬ ಸತ್ಯ ಚಳವಳಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಲೆಕ್ಕ ಕೇಳುತ್ತಿರುವ ನಾಯಕರು ನಮ್ಮೊಂದಿಗೆ ಬಂದರೆ, ಟ್ರಸ್ಟಿಗಳಿಂದ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಹಾಗೂ ಲೆಕ್ಕ ನೀಡುವ ವ್ಯವಸ್ಥೆ ಮಾಡುತ್ತೇನೆ. ಟ್ರಸ್ಟಿನವರು ಈಗಾಗಲೇ ಹಲವಾರು ಬಾರಿ ಲೆಕ್ಕ ಒಪ್ಪಿಸಿರುವುದನ್ನೂ ತಾವು ಗಮನಿಸಬೇಕು. ಮಠದಂತಹ ಧಾರ್ಮಿಕ ಸಂಸ್ಥೆಗಳ ವಿಚಾರಗಳನ್ನು ಬೀದಿಯಲ್ಲಿ ನಿಂತು ಚರ್ಚಿಸುವುದು ಸಮಾಜದ ಘನತೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.


ಯಾವುದೇ ಸಾರ್ವಜನಿಕ ಸಂಸ್ಥೆಗಳು ಮಠ, ಪೀಠಗಳು ಸಾವಿರಾರು ಜನರ ಎದುರಿಗೆ ಲೆಕ್ಕಪತ್ರ ಹಂಚಿಕೊಂಡ ಉದಾಹರಣೆ ಇಲ್ಲ. ಕೆಲ ಗುಪ್ತ ದೇಣಿಗೆಗಳನ್ನು ಬಹಿರಂಗಪಡಿಸಲು ಬರುವುದಿಲ್ಲ. ಹಾಗಾಗಿ, ಲೆಕ್ಕಪತ್ರ ಕೇಳುವ ಕೆಲ ಐದಾರು ಜನ ಪ್ರಮುಖರು ಬಹಿರಂಗ ಹೋರಾಟವನ್ನು ಕೈಬಿಟ್ಟು ನನ್ನೊಟ್ಟಿಗೆ ಬಂದರೆ ಪ್ರಧಾನ ಧರ್ಮದರ್ಶಿಗಳಾದ ಬಿ.ಸಿ. ಉಮಾಪತಿ ಅವರಿಂದ ನಿಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಿಸುತ್ತೇನೆ. ವಿವಾದಾತ್ಮಕ ಪರಿಸ್ಥಿತಿಗೆ ಸಮಾಧಾನಕರ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡುವಂತೆ ಸಮಾಜದ ಎಲ್ಲ ವರ್ಗದ ಜನರಿಗೆ ನಾಗನಗೌಡ್ರು ಮನವಿ ಮಾಡಿದ್ದಾರೆ.

- - -

-11ಎಚ್‌ಆರ್‌ಆರ್ 01: ಎನ್.ಜಿ.ನಾಗನಗೌಡ್ರು