ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ವಿರುದ್ಧ ಕೆಲವರು ಸೋಮವಾರ ನಡೆಸುತ್ತಿರುವ ಪ್ರತಿಭಟನೆಗಳಿಗೆ ದಲಿತ ಸಮುದಾಯದ ಬೆಂಬಲವಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದು ಭಾಲ್ಕಿಯ ದಲಿತ ಮುಖಂಡ ವಿಲಾಸ ಮೋರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ವಿರುದ್ಧ ಕೆಲವರು ಸೋಮವಾರ ನಡೆಸುತ್ತಿರುವ ಪ್ರತಿಭಟನೆಗಳಿಗೆ ದಲಿತ ಸಮುದಾಯದ ಬೆಂಬಲವಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದು ಭಾಲ್ಕಿಯ ದಲಿತ ಮುಖಂಡ ವಿಲಾಸ ಮೋರೆ ತಿಳಿಸಿದರು.

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವರ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸಾವಿರಾರು ಮನೆಗಳ ಮಂಜೂರಾತಿ, 44 ಸಾವಿರ ಫಲಾನುಭವಿಗಳಿಗೆ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆಯಡಿ 1 ಸಾವಿರ ಕೊಳವೆ ಬಾವಿಗಳ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ವಿವರಿಸಿದರು.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಹಾಗೂ ಅವರ ಪುತ್ರ ಸಾಗರ ಖಂಡ್ರೆ ಅವರು ಮನೆ ಮನೆಗೆ ತೆರಳಿ ಜನರ ನೆರವಿಗೆ ಧಾವಿಸಿದ್ದರು. ನಾಗ್ಪುರದ ದೀಕ್ಷಾ ಭೂಮಿಗೆ ತೆರಳುವವರಿಗೆ ಬೀದರ್‌ನಿಂದ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದರು, ದಲಿತ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿದ್ದಾರೆ ಎಂದು ಮೋರೆ ಹೇಳಿದರು.

ದಲಿತ ಮುಖಂಡ ಮಾರೂತಿ ಭಂಗಾರೆ ಮಾತನಾಡಿ, ಈಶ್ವರ್ ಖಂಡ್ರೆ ಅವರ ಹೆಸರಿಗೆ ಕಳಂಕ ತರಲು ಕೆಲವರು ರಾಜಕೀಯ ಪ್ರೇರಿತವಾಗಿ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಿನೋದ ಅಪ್ಪೆ ಮಾತನಾಡಿ, ಭಾಲ್ಕಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಡಾ.ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಭಾಲ್ಕಿಗೆ 4 ಕೋಟಿ ಅನುದಾನ ಒದಗಿಸಲಾಗಿದೆ. ಬೀದರ್‌ನ ಅತಿವಾಳ ಕ್ರಾಸ್‌ ಬಳಿ ಡಾ.ಅಂಬೇಡ್ಕರ್‌ ಸಂಶೋಧನಾ ಕೇಂದ್ರ ನಿರ್ಮಾಣಕ್ಕಾಗಿ 10 ಎಕರೆ ಜಮೀನು ಮಂಜೂರು ಮಾಡಿಸಿದಲ್ಲದೆ, ಕಟ್ಟಡ ನಿರ್ಮಾಣಕ್ಕೆ 50 ಕೋಟಿ ರು. ವೆಚ್ಚದ ಯೋಜನೆ ರೂಪಿಸಲಾಗಿದ್ದು, ಕೆಕೆಆರ್‌ಡಿಬಿಯಿಂದ ಖಂಡ್ರೆ ಈಗಾಗಲೇ 20 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಸಂಜುಕುಮಾರ ಬಾವಿಕಟ್ಟಿ ಮಾತನಾಡಿದರು. ದಲಿತ ಮುಖಂಡರುಗಳಾದ ರಾಜಕುಮಾರ ಬೌದ್ದೆ, ಪರಶಾಂತ ಕೋಟಗೆರಾ, ಚಂದ್ರಕಾಂತ ನಿರಾಟೆ, ಪ್ರದೀಪ ಮೋರೆ, ನಾರಾಯಣ ಮೋರೆ, ಸುಶಿಲ ಬರೂರೆ, ರಾಹುಲ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.