ವಿದ್ಯೆಯ ಜೊತೆಗೆ ಮಕ್ಕಳಿಗೆ ಸಂಗೀತ ಜ್ಞಾನವೂ ಮುಖ್ಯ. ಯಾರಲ್ಲಿ ಯಾವ ಪ್ರತಿಭೆ ಇರುವುದೋ ಗೊತ್ತಿರುವುದಿಲ್ಲ. ಮುಂದೆ ಸಂಗೀತದಲ್ಲಿ ಮಹೋನ್ನತ ಸಾಧನೆ ಮಾಡಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು. ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕಲಾವಿದರಿಗೆ ಯಾವ ಅಡ್ಡಿ-ಆತಂಕವೂ ಇಲ್ಲ. ಏಕೆಂದರೆ, ಅದರಲ್ಲಿ ಯಾವ ಭಾವನೆಯೂ ಇರುವುದಿಲ್ಲ. ಕಲಾವಿದರ ಭವಿಷ್ಯ ಸಾಧನೆಯ ಮೇಲೆ ನಿಂತಿದೆ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್ ಕುಮಾರ್ ಹೇಳಿದರು.ನಗರದ ಗಾಂಧಿ ಭವನದಲ್ಲಿ ಗುಡ್ ವಾಯ್ಸ್ ಸಂಗೀತ ಶಾಲೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯೆಯ ಜೊತೆಗೆ ಮಕ್ಕಳಿಗೆ ಸಂಗೀತ ಜ್ಞಾನವೂ ಮುಖ್ಯ. ಯಾರಲ್ಲಿ ಯಾವ ಪ್ರತಿಭೆ ಇರುವುದೋ ಗೊತ್ತಿರುವುದಿಲ್ಲ. ಮುಂದೆ ಸಂಗೀತದಲ್ಲಿ ಮಹೋನ್ನತ ಸಾಧನೆ ಮಾಡಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು. ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.ಸಂಗೀತ ಕಲೆಗೆ ಯಾವುದೇ ಭಾಷೆಯ ಹಂಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸೇರಿದಂತೆ ಕಲೆಯಲ್ಲಿ ಆಸಕ್ತಿಯುಳ್ಳ ಎಲ್ಲರೂ ಸಂಗೀತ, ವಾದ್ಯ ಕಲೆಗಳ ಕಲಿಕೆಯನ್ನು ಆರಂಭಿಸಿ ಸಾಧನೆ ಮಾಡಬೇಕು. ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವತ್ತ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಕಲಾ ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಹೆಚ್ಚಿಸುವಲ್ಲಿ ನಗರದ ಸಂಗೀತ ಶಾಲೆಗಳು ಉತ್ತಮ ಶ್ರಮ ಹಾಕುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ಚಂದ್ರಹಾಸ್ ಮಾತನಾಡಿ, ಸಂಗೀತವು ಧ್ವನಿ, ಲಯ, ಮಧುರತೆ ಹಾಗೂ ಭಾವನೆಗಳ ಸಮ್ಮಿಶ್ರಣ. ಮನುಷ್ಯನ ಪರಿಪೂರ್ಣತೆಯ ಸಂಕೇತವಾಗಿದೆ. ಲಲಿತ ಕಲೆಗಳಲ್ಲಿ ಸಂಗೀತ, ಗಾಯನ ಹಾಗೂ ವಾದ್ಯ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಏಕೈಕ ಶ್ರೇಷ್ಠ ಕಲೆಯಾಗಿದೆ ಎಂದು ಅಭಿಪ್ರಾಯಿಸಿದರು.ಚನ್ನರಾಯಪಟ್ಟಣದ ಖ್ಯಾತ ಹಿರಿಯ ಜಾನಪದ ಗಾಯಕ ಶಿವನಗೌಡ ಪಾಟೀಲ್ ಹಾಗೂ ರಂಗ ಭೂಮಿ ತಬಲಾ ಕಲಾವಿದ ಜಿ.ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ಭಾರತದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್.ಜಾನಕಿಯವರಿಗೆ ಒಂದು ನಿಮಿಷ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪ್ರೇರಣ ಸಂಸ್ಥೆಯ ರವಿಕುಮಾರ್, ಸಾಹಿತಿ ಚೆಲುವರಾಜು ಮಾತನಾಡಿದರು. ಕಾರ್ಯಕ್ರಮದ ಮುನ್ನ ಖ್ಯಾತ ಗಾಯಕ, ಕಲಾಶ್ರೀ ವಿದ್ಯಾಶಂಕರ್ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ ಎಲ್ಲರನ್ನು ಮುದಗೊಳಿಸಿತು. ಗುಡ್ ವಾಯ್ಸ್ ಶಾಲೆಯ ವಿದ್ಯಾರ್ಥಿಗಳಿಗಳಿಂದ ಗಿಟಾರ್ ವಾದನ, ಕೀಬೋರ್ಡ್, ಹಾಗೂ ಗಾಯನ ಎಲ್ಲರನ್ನು ರಂಜಿಸಿತು. ಉಪನ್ಯಾಸಕ ಬಸವರಾಜ್ ಎಲ್ಲರನ್ನು ಸ್ವಾಗತಿಸಿದರು.ನಿವೃತ್ತ ಶಿಕ್ಷಕ, ಕಿರುತೆರೆ ನಿರ್ದೇಶಕ ಜನಾರ್ಧನ ಕೊಂಡ್ಲಿ ಆಕರ್ಷಕವಾಗಿ ಕಾರ್ಯಕ್ರಮ ನಿರೂಪಿಸಿದರು. ಗುಡ್ ವಾಯ್ಸ್ ಶಾಲೆಯ ವ್ಯವಸ್ಥಾಪಕ ತರಬೇತುದಾರ ಸಿ.ದೇವರಾಜ್ ಭಾಗವಹಿಸಿದ್ದರು.