ಜನರ ಅಪೇಕ್ಷೆಯಂತೆ ಪಕ್ಷೇತರನಾಗಿ ಸ್ಪರ್ಧೆ: ವಿನಯ್‌

| Published : Apr 18 2024, 02:18 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಅಪೇಕ್ಷೆಯಂತೆ ಈಗ ಎರಡನೇ ಬಾರಿಗೆ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್ ಟಿಕೆಟ್ ತಪ್ಪಿದ ನಂತರ ಪಕ್ಷೇತರ ನಿಲ್ಲುವಂತೆ ಜನರ ಒತ್ತಾಯದಂತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಇನ್‌ಸೈಟ್ಸ್‌ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜನರ ಸ್ಪಂದನೆ ಉತ್ಸಾಹ ಹೆಚ್ಚಿಸಿದೆ, ಕಣದಿಂದ ಹಿಂದೆ ಸರಿಯಲ್ಲ ಎಂದು ಪುನರುಚ್ಚಾರ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಅಪೇಕ್ಷೆಯಂತೆ ಈಗ ಎರಡನೇ ಬಾರಿಗೆ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್ ಟಿಕೆಟ್ ತಪ್ಪಿದ ನಂತರ ಪಕ್ಷೇತರ ನಿಲ್ಲುವಂತೆ ಜನರ ಒತ್ತಾಯದಂತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಇನ್‌ಸೈಟ್ಸ್‌ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಜನರು ಸ್ವಯಂಪ್ರೇರಿತರಾಗಿ ನಾಮಪತ್ರ ಸಲ್ಲಿಸುವಾಗ ಹಾಜರಿದ್ದರು. ಕಿಮೀಗಟ್ಟಲೇ ನಡೆದುಕೊಂಡೇ ಬಂದರು. ಈ ಎಲ್ಲರ ಉತ್ಸಾಹ ನೋಡಿದರೆ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತವೆಂಬ ವಿಶ್ವಾಸವಿದೆ ಎಂದರು.

ಕನಿಷ್ಠ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಎಷ್ಟೇ ಒತ್ತಡ ಬಂದರೂ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಗ್ರಾಮೀಣ, ನಗರ ವಾಸಿಗಳೂ ಮೆರವಣಿಗೆಗೆ ಬಂದಿದ್ದರು. ಇದು ನನ್ನ ಉತ್ಸಾಹ ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ನಾನು ಬರುವಾಗ ಅಂಗಡಿ, ಹೋಟೆಲ್‌ನಲ್ಲಿದ್ದವರು, ರಸ್ತೆಯಲ್ಲಿ ನಿಂತಿದ್ದವರು, ಮಹಿಳೆಯರು, ಯುವಕ-ಯುವತಿಯರು, ಮಹಿಳೆಯರು ನನಗೆ ವಿಜಯದ ಸಂಕೇತ ತೋರಿಸುತ್ತಿದ್ದರು. ದಾವಣಗೆರೆ ಸಂಸದನಾಗುವ ಸಂಪೂರ್ಣ ನಂಬಿಕೆ, ವಿಶ್ವಾಸವಿದೆ. ಒಂದು ಮತ ಅಂತರದಲ್ಲಿ ಗೆದ್ದರೂ ಅದು ಗೆಲುವೇ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ, ನಾಯಕರ ಪೈಕಿ ಯಾರೂ ನನ್ನನ್ನು ಭೇಟಿಯಾಗಿಲ್ಲ. ಕಾಂಗ್ರೆಸ್‌ ಪಕ್ಷದವರು ಸಂಧಾನಕ್ಕೆ ಬಂದಿದ್ದು ನಿಜ. ಆದರೆ, ಸಂಧಾನ ಯಶಸ್ವಿಯಾಗಿಲ್ಲ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಸ್ಪರ್ಧೆಯಿಂದ ಭಯ ಶುರುವಾಗಿದೆ ಎಂದರು.

ಕ್ಷೇತ್ರದ ನೂರಾರು ಗ್ರಾಮಗಳಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಇಂದಿಗೂ ಭೇಟಿ ನೀಡಿಲ್ಲ. ಅಭಿವೃದ್ಧಿ ಕಾರ್ಯವನ್ನೂ ಕೈಗೊಂಡಿಲ್ಲ. ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಹಲವಾರು ಸಮಸ್ಯೆಗಳಿವೆ. ಎಷ್ಟೋ ಗ್ರಾಮಗಳಿಗೆ ಶಾಸಕರೂ ಹೋಗಿಲ್ಲ ಎಂದು ದೂರಿದರು.

- - - ಟಾಪ್‌ ಕೋಟ್‌

ಒಂದು ವರ್ಷದ ಹಿಂದಷ್ಟೇ ದಾವಣಗೆರೆಗೆ ಮರಳಿದವನು ನಾನು. ನನಗೆ ರಾಜಕೀಯ ಹಿನ್ನೆಲೆ ಇಲ್ಲ. ಅಪ್ಪ, ಅಮ್ಮ ರಾಜಕೀಯದಲ್ಲಿ ಇಲ್ಲ. ನನ್ನ ವ್ಯಕ್ತಿತ್ವ, ಗುರಿ, ಕೆಲಸ ನೋಡಿ ಇಷ್ಟೊಂದು ಜನ ಬಂದಿದ್ದಾರೆ. ಏ.22ರ ಮಧ್ಯಾಹ್ನ 3 ಗಂಟೆಗೆ ಚಿಹ್ನೆ ಸಿಗಲಿದೆ. ಜಿ.ಬಿ.ವಿನಯಕುಮಾರ ಬ್ರಾಂಡ್ ಆಗಿದ್ದು, ಚಿಹ್ನೆ ಯಾವುದೇ ಸಿಕ್ಕರೂ ಕಪ್ ಮಾತ್ರ ನಮ್ಮದೇ

- ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ

- - - (* ಒಂದೇ ಫೋಟೋ ಬಳಸಿ)

-17ಕೆಡಿವಿಜಿ19, 20, 21:

ದಾವಣಗೆರೆ ಡಿಸಿ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ. ನಾಮಪತ್ರ ಸಲ್ಲಿಸಿ ಹೊರಬಂದ ಕ್ಷಣ.