ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ಅಗತ್ಯ: ಶಾಸಕ ಶರತ್ ಬಚ್ಚೇಗೌಡ

| Published : Jan 31 2025, 12:48 AM IST

ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ಅಗತ್ಯ: ಶಾಸಕ ಶರತ್ ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚ ಗ್ಯಾರಂಟಿಗಳನ್ನು ನೀಡುವುದರ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವ ದೃಷ್ಟಿಯಿಂದ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಜೊತೆಗೆ ಶಾಸಕರ ಅನುದಾನವನ್ನು ಸಹ ಬಳಕೆ ಮಾಡಿಕೊಂಡು ಅತ್ತಿವಟ್ಟ, ತವಟಹಳ್ಳಿ, ಉಮ್ಮಲು, ಗೂಗುಟ್ಟಹಳ್ಳಿ, ವಳಗೆರೆಪುರ ಗ್ರಾಮಗಳಲ್ಲಿ 3 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮಗಳಿಗೆ ಮತ್ತಷ್ಟು ಅಭಿವೃದ್ಧಿಗೆ ಅನುದಾನವನ್ನು ಒದಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಾದಂಥ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತಿದ್ದು ಪಕ್ಷಾತೀತ ಅಭಿವೃದ್ಧಿಗೆ ಗ್ರಾಮಗಳಲ್ಲಿ ನಾಗರಿಕರ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಜಡಿಗೆನಹಳ್ಳಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಬಳಿಗಾನಹಳ್ಳಿ ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪಂಚ ಗ್ಯಾರಂಟಿಗಳನ್ನು ನೀಡುವುದರ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವ ದೃಷ್ಟಿಯಿಂದ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಜೊತೆಗೆ ಶಾಸಕರ ಅನುದಾನವನ್ನು ಸಹ ಬಳಕೆ ಮಾಡಿಕೊಂಡು ಅತ್ತಿವಟ್ಟ, ತವಟಹಳ್ಳಿ, ಉಮ್ಮಲು, ಗೂಗುಟ್ಟಹಳ್ಳಿ, ವಳಗೆರೆಪುರ ಗ್ರಾಮಗಳಲ್ಲಿ 3 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮಗಳಿಗೆ ಮತ್ತಷ್ಟು ಅಭಿವೃದ್ಧಿಗೆ ಅನುದಾನವನ್ನು ಒದಗಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ನಾಗರಾಜ್ ಮಾತನಾಡಿ, ಕೆಂಬಾಳಿಗನಹಳ್ಳಿ ಗ್ರಾಮದಲ್ಲಿ ಸುಮಾರು 40 ವರ್ಷಗಳ ಹಿಂದೆ ಗೋಮಾಳದಲ್ಲಿ ದರ್ಖಾಸ್ತು ಮೂಲಕ ಮಂಜೂರಾದ ಜಮೀನಿಗೆ ಪೋಡಿ ಮಾಡಿ ಕಾಲಂನಲ್ಲಿ ಪ್ರತ್ಯೇಕ ಸರ್ವೇ ನಂಬರ್ ನೀಡುವ ಮೂಲಕ ಪಹಣಿ, ವಿಸ್ತೀರ್ಣ, ಖಾತೆದಾರರ ಹೆಸರು ಸೇರಿದಂತೆ ಇತರೆ ಸರ್ವೇ ದಾಖಲೆಯನ್ನು ಫಲಾನುಭವಿಗಳಿಗೆ ಒದಗಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡರಿಗೆ ಮನವಿ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ ರಾಜಶೇಖರ ಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾಗ್ಯ ನಾಗರಾಜ್, ಸದಸ್ಯ ಡಿ.ನಾಗರಾಜ್, ಮುಖಂಡರಾದ ಗುರುಬಸಪ್ಪ, ನಂಜಪ್ಪ, ಡೈರಿ ಮಂಜು, ಮುನಿಶಾಮಪ್ಪ, ಮಂಜುನಾಥ್, ಬಾಲರಾಜು, ರವಿ, ರಾಜಣ್ಣ ಸೇರಿದಂತೆ ಗ್ರಾಮದ ಹಲವಾರು ಮುಖಂಡರು ಹಾಜರಿದ್ದರು.