ಕೈ-ಮೈತ್ರಿಕೂಟ ಅಭ್ಯರ್ಥಿಗಳಿಗೆ ಪಕ್ಷೇತರರ ಭೀತಿ

| Published : May 29 2024, 12:47 AM IST

ಕೈ-ಮೈತ್ರಿಕೂಟ ಅಭ್ಯರ್ಥಿಗಳಿಗೆ ಪಕ್ಷೇತರರ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮತ್ತು ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಅ.ದೇವೇಗೌಡ ಅವರಿಗೆ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಯೇ ಭಯ ಸೃಷ್ಟಿಸಿದೆ.

ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮತ್ತು ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಅ.ದೇವೇಗೌಡ ಅವರಿಗೆ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಯೇ ಭಯ ಸೃಷ್ಟಿಸಿದೆ.

ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆಗಳು ಏರ್ಪಡುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸಿ ಅ.ದೇವೇಗೌಡ ಅವರನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ನಡುವೆ ನೇರ ನೇರಾ ಸ್ಪರ್ಧೆ ನಡೆಯಲಿದೆ ಎಂದೇ ಭಾವಿಸಲಾಗಿತ್ತು. ಆದರೀಗ ಪ್ರಬಲರು ಪಕ್ಷೇತರರಾಗಿ ಸ್ಪರ್ಧೆ ಮಾಡಿರುವುದು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.

ಬೆಂಗಳೂರು ಪದವೀಧರರ ಕ್ಷೇತ್ರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿದೆ. ಇದರಲ್ಲಿ 36 ವಿಧಾನಸಭಾ ಕ್ಷೇತ್ರಗಳು, 5 ಲೋಕಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರಲಿದ್ದು, ಇಲ್ಲಿಸುಮಾರು 1,10,000ಕ್ಕೂ ಅಧಿಕ ಮತದಾರರು ಇದ್ದಾರೆ. ಈ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಪಕ್ಷೇತರರು ಯಾವ ರಾಜಕೀಯ ಪಕ್ಷದ ಅಭ್ಯರ್ಥಿಯ ಮತಬುಟ್ಟಿಗೆ ಕೈ ಹಾಕುತ್ತಾರೊ ಎಂಬ ಭೀತಿ ಶುರುವಾಗಿದೆ.

ಈ ಕ್ಷೇತ್ರದಲ್ಲಿ ಅ.ದೇವೇಗೌಡ ಮತ್ತು ರಾಮೋಜಿಗೌಡರವರು ಮತದಾರರನ್ನು ನೋಂದಾಯಿಸಿದ್ದಾರೆ. ಆದರೆ, ಅವರಿಗಿಂತ ಹೆಚ್ಚಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ನೋಂದಾಯಿಸುವಲ್ಲಿ ಶ್ರಮ ವಹಿಸಿದ್ದರು. ಅವರಲ್ಲಿ ಕೆಲವರು ಪಕ್ಷೇತರರಾಗಿಯೂ ಸ್ಪರ್ಧೆ ಮಾಡಿದ್ದಾರೆ.

ಚುನಾವಣಾ ಕಣದಲ್ಲಿ 15 ಮಂದಿ ಅಭ್ಯರ್ಥಿಗಳಿದ್ದು, ಹಿರಿಯ ವಕೀಲ ಉದಯ್ ಸಿಂಗ್ , ನೀಲಕಂಠ, ಪುಟ್ಟಸ್ವಾಮಿ, ಎಂ.ಪಿ.ಕರಬಸಪ್ಪ ಸೇರಿದಂತೆ ಕೆಲ ಪಕ್ಷೇತರರು ಗಂಭೀರ ಸ್ಪರ್ಧಿಗಳಾಗಿದ್ದು, ಇವರು ಕೂಡ ಹೆಚ್ಚು ಮತದಾರರನ್ನು ನೋಂದಾಯಿಸಿದ್ದು, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಈ ಪಕ್ಷೇತರರು ಬಿಜೆಪಿ-ಕಾಂಗ್ರೆಸ್ ಮತಗಳ ಮೇಲೆ ಕಣ್ಣಿಟ್ಟಿದ್ದು, ಯಾರಿಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರಗಳು ನಡೆದಿವೆ.

ಸರ್ಕಾರದ ವರ್ಚಸ್ಸಿನ ಮೇಲೆ ನಂಬಿಕೆ:

ಈ ಹಿಂದಿನ ಮೂರು ಚುನಾವಣೆಗಳಿಂದಲೂ ಸೋಲು ಅನುಭವಿಸುತ್ತಲೇ ಬಂದಿರುವ ಹ್ಯಾಟ್ರಿಕ್ ಸೋಲುಗಾರ ಕಾಂಗ್ರೆಸ್ ನ ರಾಮೋಜಿಗೌಡ ಪರ ಸಿಂಪತಿಯೂ ಇದೆ. ತಾವು ಸಂಘಟನೆಗಳ ಜತೆಗೂಡಿ ಶಿಕ್ಷಕರು, ಉಪನ್ಯಾಸಕರು, ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ನಡೆಸಿದ ಹೋರಾಟ ಹಾಗೂ ನಿರುದ್ಯೋಗ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅದರ ಜೊತೆಗೆ ಗ್ಯಾರಂಟಿಗಳ ಅನುಷ್ಠಾನದಿಂದಾಗಿ ಕಾಂಗ್ರೆಸ್ ಸರ್ಕಾರದ ವರ್ಚಸ್ಸು ಕೆಲಸ ಮಾಡಲಿದೆ ಎಂದು ನಂಬಿಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಪುಟ್ಟಣ್ಣರವರ ಗೆಲುವಿಗಾಗಿ ರಾಮೋಜಿಗೌಡ ಶ್ರಮಿಸಿದ್ದರು. ಇದೀಗ ಪುಟ್ಟಣ್ಣರವರು ರಾಮೋಜಿಗೌಡರವರ ಹೆಗಲಿಗೆ ಹೆಗಲು ನೀಡಿ ಅವರ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದು, ಗೆಲುವು ನಿಶ್ಚಿತ ಎಂದು ಭಾವಿಸಿದ್ದಾರೆ. ಉಳಿದಂತೆ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

5 ವರ್ಷಗಳ ಸಾಧನೆ ಮುಂದಿಟ್ಟು ಪ್ರಚಾರ :

ಇನ್ನು ವಿಧಾನ ಪರಿಷತ್ ಹಾಲಿ ಸದಸ್ಯ ಅ.ದೇವೇಗೌಡರವರು ತಮ್ಮ ಐದು ವರ್ಷಗಳ ಕಾರ್ಯಕ್ರಮಗಳು, ಪದವೀಧರರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಹೋರಾಟ , ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ರಾಮೋಜಿಗೌಡ ಹಾಗೂ ಅ.ದೇವೇಗೌಡ ಜೊತೆಗೆ ಉದಯ್ ಸಿಂಗ್ , ನೀಲಕಂಠ, ಪುಟ್ಟಸ್ವಾಮಿ, ಎಂ.ಪಿ.ಕರಬಸಪ್ಪ ಸೇರಿದಂತೆ ಕೆಲ ಪಕ್ಷೇತರ ಅಭ್ಯರ್ಥಿಗಳು ಕೂಡ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಗಳನ್ನು ಮುದ್ರಿಸಿದ್ದು, ವಿಧಾನ ಪರಿಷತ್ ಗೆ ತಾವು ಆಯ್ಕೆಯಾದಲ್ಲಿ ಭರವಸೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಪದವೀಧರರು ನಿರುದ್ಯೋಗಿಗಳಾಗಿದ್ದು, ಅವರ ಸಮಸ್ಯೆಗಳು ಚುನಾವಣಾ ಅಜಾಂಡಗಳಾಗದೆ ಕೇವಲ ಅಭ್ಯರ್ಥಿಗಳು ಪರಸ್ಪರ ಆರೋಪ - ಪ್ರತ್ಯಾರೋಪಗಳಲ್ಲಿ ತೊಡಗಿರುವುದೇ ಹೆಚ್ಚು ಚರ್ಚೆಯ ವಸ್ತುಗಳಾಗುತ್ತಿವೆ. ಈ ಆರೋಪ ಪ್ರತ್ಯಾರೋಪಗಳಿಂದ ನಮಗೆ ಯಾವುದೇ ರೀತಿಯಲ್ಲೂ ಪ್ರಯೋಜವಾಗದು ಎನ್ನುತ್ತಿದ್ದಾರೆ ಮತದಾರರು.

28ಕೆಆರ್ ಎಂಎನ್ 3,4.ಜೆಪಿಜಿ

3.ರಾಮೋಜಿಗೌಡ

4.ಅ.ದೇವೇಗೌಡ