ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಈಶಾನ್ಯ ಕರ್ನಾಟಕ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಮತ್ತು 371 (ಜೆ) ಕಲಂ ಕುರಿತಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಲು ಬಿಜೆಪಿಯ ಅಭ್ಯರ್ಥಿ ಅಮರನಾಥ ಪಾಟೀಲರ ಗೆಲುವು ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.ನ್ಯಾಯವಾದಿಗಳ ಸಂಘದಲ್ಲಿ ಬುಧವಾರ ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಪದವೀಧರ ಮತ್ತು ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಹಾಗೂ ನಿಮ್ಮ ಪರವಾಗಿ ಧ್ವನಿ ಎತ್ತಬಲ್ಲ ಸಮರ್ಥ ಅಭ್ಯರ್ಥಿಯಾಗಿರುವ ಅಮರನಾಥ ಪಾಟೀಲರಿಗೆ ಬೆಂಬಲಿಸಬೇಕು. ಪಾಟೀಲರು ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದಾಗಲೂ ಉತ್ತಮ ಕೆಲಸ ನಿರ್ವಹಿಸಿ ಜನಪ್ರಿಯತೆ ಪಡೆದಿದ್ದಾರೆ. ಯಾವತ್ತು ಜನರ ಮಧ್ಯೆ ಇದ್ದು ಕೆಲಸ ಮಾಡುವ ಅಮರನಾಥ ಪಾಟೀಲ್ ರಾಜಕಾರಣಕ್ಕಾಗಿ ರಾಜಕೀಯ ಮಾಡುತ್ತಿಲ್ಲ. ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಮರನಾಥ ಪಾಟೀಲರು ಚುನಾವಣೆ ಸಂದರ್ಭದಲ್ಲಿ ಮಾತ್ರ ಕೈ ಕುಲುಕುವ ರಾಜಕಾರಣಿಯಾಗದೆ ಜನರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುವ ಒಬ್ಬ ಸಜ್ಜನ ರಾಜಕಾರಣಿ ಎಂದು ಹೇಳಿದರು.
ಅಭಿವೃದ್ಧಿಗಾಗಿ ಅಮರನಾಥ ಪಾಟೀಲರಿಗೆ ಮತ ನೀಡಿ: ಈಶಾನ್ಯ ಪದವೀಧರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲರನ್ನು ಗೆಲ್ಲಿಸಬೇಕು ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಕರೆ ನೀಡಿದರು.ಅಮರನಾಥ ಪಾಟೀಲರು ಆರು ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿ ಅಪಾರ ಅನುಭವ ಹೊಂದಿದ್ದು ಅಭಿವೃದ್ಧಿಪರ ಕೆಲಸವನ್ನು ಮಾಡಿರುವುದರಿಂದ ಎರಡನೇ ಬಾರಿಗೆ ಅವರನ್ನು ಆಯ್ಕೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಪದವೀಧರ ಮತ್ತು ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲಿಸಬೇಕು ಕ್ರಿಯಾಶೀಲ ವ್ಯಕ್ತಿಯಾಗಿ ಮತ್ತು ಮಹಾಗಾoವದ ಚಂದ್ರಶೇಖರ್ ಪಾಟೀಲ್ ಹಾಗೂ ನೀಲಕಂಠ ರಾವ್ ಪಾಟೀಲ್ ರಂತಹ ಮಹಾನ್ ವ್ಯಕ್ತಿಗಳ ಕುಟುಂಬದಿಂದ ಬಂದ ಅಮರನಾಥ ಪಾಟೀಲರು ಉತ್ತಮ ವ್ಯಕ್ತಿತ್ವ ಹೊಂದಿದ್ದು ಪ್ರಗತಿ ಪರವಾಗಿ ಕೆಲಸ ಮಾಡುವವರು ಎಂದು ಹೇಳಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಮತಪತ್ರದ ಮೊದಲ ಸಂಖ್ಯೆ ಅಮರನಾಥ ಪಾಟೀಲ್ ಅವರದು. ಮತ ಪತ್ರದಲ್ಲಿ ಯಾವುದೇ ಚಿಹ್ನೆಗಳಿಲ್ಲದಿರುವುದರಿಂದ ಅಭ್ಯರ್ಥಿ ಹೆಸರು ಮತ್ತು ಪಾರ್ಟಿಯ ಹೆಸರು ಮಾತ್ರ ಮುದ್ರಿತವಾಗಿರುತ್ತದೆ. ಅದರ ಮುಂದುಗಡೆ ಕನ್ನಡದ ಅಥವಾ ರೋಮನ್ ಅಂಕಿ ಒಂದನ್ನು ಹಾಕಿ ಅಥವಾ ಉದ್ದನೆ ಒಂದು ಗೆರೆಯನ್ನು ಎಳೆಯುವ ಮೂಲಕ ಮತ ಚಲಾಯಿಸಬೇಕಾಗಿದೆ. ರಾಷ್ಟ್ರಪತಿಗಳ ಚುನಾವಣೆಯಲ್ಲೂ ಈ ರೀತಿಯ ಕ್ರಮವಿದ್ದು ಅನೇಕ ಮತಗಳು ಅಸಿಂಧುವಾಗಿದೆ. ಆದುದರಿಂದ ಪದವೀಧರ ಮತದಾರರು ಬಹಳ ಎಚ್ಚರಿಕೆಯಿಂದ ತಮ್ಮ ಮೊದಲ ಪ್ರಾಶಸ್ತ್ಯದ ಒಂದು ಸಂಖ್ಯೆಯನ್ನು ಬರೆದು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕು. ಅಮರನಾಥ ಪಾಟೀಲರು ಪದವೀಧರ ಹಾಗೂ ಶಿಕ್ಷಕರ ಜೊತೆ 24x7 ಇದ್ದು ಕೆಲಸ ನಿರ್ವಹಿಸಲು ಸದಾ ಲಭ್ಯವಿರುತ್ತಾರೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಬಿರಾದಾರ್ ಉಪಾಧ್ಯಕ್ಷರಾದ ಧರ್ಮಣ್ಣ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನಾಶಿ, ನ್ಯಾಯವಾದಿಗಳಾದ ದಯಾಘನ ಧಾರವಾಡಕರ್, ವಿದ್ಯಾಸಾಗರ ಕುಲಕರ್ಣಿ, ಬಿ ಎಸ್ ಜಾಲ್ದೆ, ವಿ.ಬಿ ಕುಲಕರ್ಣಿ, ಕಲ್ಯಾಣಪ್ಪ ವಡಗೇರ ಹಾಜರಿದ್ದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರನ್ನು ಹೈಕೋರ್ಟ್ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.