ಸಾರಾಂಶ
ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ತಾಪಮಾನ ಏರಿಕೆಯಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಜನಜೀವನ ತತ್ತರಿಸಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿ ದಿನೇದಿನೇ ತಾಪಮಾನ ಹೆಚ್ಚುತ್ತಿದ್ದು, ರಾಯಚೂರಿನಲ್ಲಿ ಮಂಗಳವಾರ 45.6 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ ಒಂದು ದಶಕದಲ್ಲೇ ರಾಯಚೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ದಾಖಲಾದ ಅತೀ ಗರಿಷ್ಠ ತಾಪಮಾನವಾಗಿದೆ.ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕರ್ನಾಟಕದ ಉತ್ತರ ಹಾಗೂ ಕಲ್ಯಾಣ ಜಿಲ್ಲೆಗಳಲ್ಲಿ ಕಳೆದ 3 ದಿನದಿಂದ ಉಷ್ಣ ಅಲೆ ಹೆಚ್ಚಿದ್ದು, ಜನಜೀವನ ಕಂಗಾಲಾಗಿದೆ.ಹವಾಮಾನ ಇಲಾಖೆಯ ಪ್ರಕಾರ, ಏ.30ರ ಮಂಗಳವಾರ ರಾಜ್ಯದಲ್ಲೇ ಅತೀ ಹೆಚ್ಚಿನ ಗರಿಷ್ಠ 45.6 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ರಾಯಚೂರು ಜಿಲ್ಲೆಯ ಸಾಲಗುಂದಿ ಹೋಬಳಿಯ ಧಡೇಸುಗೂರ್, ಸೋಮಲಾಪೂರ ಹಾಗೂ ಹುಡಾ ಹೋಬಳಿಯ ಮುಕ್ಕುಂದಾ, ರೌಡಕುಂದಾ ಗ್ರಾಮಗಳ ಪರಿಸರದಲ್ಲಿ ದಾಖಲಾಗಿದೆ.ಇನ್ನು ಇದೇ ದಿನ ಕಲಬುರಗಿ ಜಿಲ್ಲೆಯ ಕಾಳಗಿ, ರಾಯಚೂರು ಜಿಲ್ಲೆ ದೇವದುರ್ಗದ ಗಬ್ಬೂರ, ಗಿಲ್ಲೇಸುಗೂರ್ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ್ ಹೋಬಳಿ ವ್ಯಾಪ್ತಿಯ ಕರಾಡಿ, ಮರೋಳ, ಅಮರಾವತಿ, ಬೂದಿಹಾಳಗಳಲ್ಲಿ 45.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.
ಇನ್ನು ರಾಯಚೂರು ಜಿಲ್ಲೆ ಸಿಂಧನೂರಿನ ಬಾದರ್ಲಿ, ಮಾನ್ವಿಯಲ್ಲಿ ಕ್ರಮವಾಗಿ 45 ಹಾಗೂ 45.2, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಲತವಾಡದಲ್ಲಿ 45 ಡಿಗ್ರಿ ಸೆಲ್ಶಿಯಸ್, ಯಾದಗಿರಿ ಜಿಲ್ಲೆಯ ಶಹಾಪುರದ ಗೋಗಿಯಲ್ಲಿ 45.1 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.ಇದಲ್ಲದೆ ರಾಯಚೂರು, ಕಲಬುರಗಿ, ವಿಜಯಪುರ, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಗದಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಸೋಮವಾರ 42ರಿಂದ 45.6 ಡಿಗ್ರಿ ಸೆಲ್ಸಿಯಸ್ ತಾಪ ದಾಖಲಾಗಿತ್ತು.ಮುಂದಿನ 5 ದಿನಗಳ ಕಾಲ ಕರ್ನಾಟಕದ ಉತ್ತರ ಭಾಗದಲ್ಲಿ ಉಷ್ಣ ಮಾರುತಗಳು ಬೀಸುವುದು ಮುಂದುವರಿಯಲಿದೆ. ರಾತ್ರಿಯೂ ಕೂಡಾ ಉಷ್ಣಾಂಶದಲ್ಲಿ ಏರಿಕೆ ಅನುಭವಕ್ಕೆ ಬರಲಿದ್ದು, ಜನತೆ ಬಿಸಿಲಾಘಾತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುಂಜಾಗ್ರತೆ ಕ್ರಮಗಳಿಗೆ ಮುಂದಾಗುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.