ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಎಂಟು ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಅಡಳಿತ ಅಧಿಕಾರಿಗಳ ಸಂಘ, ಕೇಂದ್ರ ಸಮಿತಿಯ ನಿರ್ದೇಶಕನದ ಮೇರೆಗೆ ಮುಷ್ಕರ ಕೈಗೊಂಡಿದ್ದರೂ ಸರ್ಕಾರ ಇದುವರೆಗೂ ನಮ್ಮ ಬೇಡಿಕೆಗಳ ಈಡೇರಿಸಲು ಗಮನಹರಿಸಿರುವುದಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ದೇವರಾಜು ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕಳೆದ ಎಂಟು ದಿನಗಳಲ್ಲಿ ಮೂಲಭೂತ ಸೌಕರ್ಯ, ಬಡ್ತಿ, ಅಂತರ ಜಿಲ್ಲಾ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತಿದ್ದೇವೆ. ಆದರೆ ಸರ್ಕಾರದ ಪ್ರತಿನಿಧಿಗಳಿಂದ ಇದುವರೆಗೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಮುಷ್ಕರವನ್ನು ಮುಂದುವರೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸರ್ಕಾರಕ್ಕೆ ಹೊರೆಯಾಗುವಂತಹ ಯಾವ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಬದಲಾಗಿ ನಮ್ಮ ಮೇಲಿರುವ ಹೊರೆಯನ್ನು ಇಳಿಸಿ ಎಂದು ಕೇಳುತಿದ್ದೇವೆ ಎಂದರು.ಸರ್ಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಮಿತಿಯ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರೂ, ಬೇಡಿಕೆಗಳ ಈಡೇರಿಕೆಯ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ನಮಗೂ ಸಹ ಮುಷ್ಕರದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲು ಇಷ್ಟವಿಲ್ಲ. ಆದರೆ ನಮ್ಮ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗದೆ ಕೆಲಸ ಮಾಡುವುದು ಕಷ್ಟವಾಗಿದೆ ಎಂದರು.ಗ್ರಾಮ ಆಡಳಿತ ಆಧಿಕಾರಿಗಳ ಹುದ್ದೆಗೆ ಶ್ರೀಮಂತರು ಬರುವುದಿಲ್ಲ. ಮನೆಯ ಸ್ಥಿತಿಗತಿ ನೋಡಿ, ಓದುವ ಹಂಬಲವಿದ್ದರೂ ಕೆಲಸ ಅನಿವಾರ್ಯವಾದ ಕಾರಣ ಬರುತ್ತೇವೆ. ನಮಗೂ ಮನೆ, ಕುಟುಂಬ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಇಂತಹ ಅನೇಕ ಸಮಸ್ಯೆಗಳಿವೆ. ಹಾಗಾಗಿ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳ ಕಡೆಗೆ ಗಮನಹರಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ.ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದ ಭಾಗವಾಗಿ ಇಂದು ಹುಬ್ಬಳಿ ಚಲೋ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಿಂದಲೂ ಸುಮಾರು 10ಕೂ ಹೆಚ್ಚು ಜನರು ಹುಬ್ಬಳ್ಳಿ ಚಲೋ ಹೋರಾಟದಲ್ಲಿ ಪಾಲ್ಗೊಳ್ಳುತಿದ್ದಾರೆ. ಸರ್ಕಾರ ಎಷ್ಟು ಬೇಗ ನಮ್ಮ ಸಮಸ್ಯೆಗೆ ಸ್ಪಂದಿಸುತ್ತದೆಯೋ, ಅಷ್ಟು ಬೇಗ ನಾವು ಸಾರ್ವಜನಿಕ ಸೇವೆಗೆ ಮರಳುತ್ತೇವೆ. ಹಾಗಾಗಿ ಸರ್ಕಾ ವಿಳಂಬ ನೀತಿ ಅನುಸರಿಸಬಾರದು ಎಂದು ಎಸ್.ದೇವರಾಜು ಒತ್ತಾಯಿಸಿದರು.ವಿ.ಎ.ಓಗಳ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಕಲ್ಲೇಶ್ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಅರಿವು ನಮಗೆ ಇದೆ.ಆದರೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಅನಿವಾರ್ಯವಾಗಿದೆ. ನಮಗೂ ಕುಟುಂಬ, ಮಕ್ಕಳು ಇದ್ದಾರೆ. ಹಾಗಾಗಿ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳತ್ತ ಗಮನಹರಿಸಬೇಕು ಎಂಬುದು ಸರ್ಕಾರಕ್ಕೆ ವಿನಮ್ರ ಮನವಿಯಾಗಿದೆ ಎಂದರು.ಮುಷ್ಕರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ದೇವರಾಜು, ತಾಲೂಕು ಅಧ್ಯಕ್ಷ ಕಲ್ಲೇಶ್, ಉಪಾಧ್ಯಕ್ಷ ದೇವರಾಜು, ಚಂದ್ರಕಲ, ರವಿಕುಮಾರ್, ಅನಿಲ್ ಕ್ರಿಸ್ಟೋಪರ್, ಶ್ರೀನಿವಾಸ್, ಮಂಜುನಾಥ್, ಸೂರಜ್, ದಿವ್ಯ, ಸಹನ, ಬಿಂದ್ರುಶ್ರೀ ಸೇರಿದಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನದ ವೇಳೆ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆ ಮತ್ತು ಬೇಡಿಕೆ ಕುರಿತು ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.ಫೋಟೋ: ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.