ಜೀತಮುಕ್ತರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ

| Published : Oct 27 2024, 02:35 AM IST

ಸಾರಾಂಶ

ಈಗಿನ ಕಾಲದಲ್ಲಿ ಅನೇಕ ಯುವಜನರು ಗುತ್ತಿಗೆ ಆಧಾರದಲ್ಲಿ ಇನ್ನೊಂದು ರೀತಿಯಲ್ಲಿ ಜೀತವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಬಡಜನರಿಗೆ ನ್ಯಾಯ ಸಿಗಬೇಕಾದರೆ ಹೋರಾಟಗಳ ಮೂಲಕ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ. ಜೀತಮುಕ್ತರಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಜೀತದಾಳುಗಳಲ್ಲಿ ಬಹುತೇಕರು ಅನಕ್ಷರಸ್ಥರೇ ಆಗಿರುವುದರಿಂದ ಅವರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಜೊತೆಗೆ ಅವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಜೀವಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ಜೀವಿಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಜೀತ ಪದ್ದತಿ ರದ್ದತಿ ಕಾನೂನು ಜಾರಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀತಮುಕ್ತರಿಗೆ ಸೌಲಭ್ಯ ಕಲ್ಪಿಸಿಲ್ಲ

ತಾಲೂಕಿನಲ್ಲಿ ಬಹುತೇಕ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರು ಜೀತಕ್ಕೆ ಇರುತ್ತಾರೆ. ನಾವು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ಮಾಡಿ ಜೀತಕ್ಕೆ ಇರುವಂತವರನ್ನು ಗುರುತಿಸಿ ಅವರನ್ನು ಜೀತದಿಂದ ಬಿಡುಗಡೆ ಮಾಡಿಸುವಂತಹ ಕೆಲಸ ನಾವು ಮಾಡಿದ್ದೇವೆ. ಬಿಡುಗಡೆಯಾದಂತವರಿಗೆ ಸರ್ಕಾರ ಸರಿಯಾಗಿ ಅವರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯವನ್ನು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಜೀವಿಕ ಸಂಘಟನೆಯ ಚನ್ನರಾಯಪ್ಪ ಮಾತನಾಡಿ ಈ ಪ್ರಸ್ತುತ ಕಾಲದಲ್ಲಿ ಅನೇಕ ಯುವಜನರು ಗುತ್ತಿಗೆ ಆಧಾರದಲ್ಲಿ ಇನ್ನೊಂದು ರೀತಿಯಲ್ಲಿ ಜೀತವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಬಡಜನರಿಗೆ ನ್ಯಾಯ ಸಿಗಬೇಕಾದರೆ ಹೋರಾಟಗಳ ಮೂಲಕ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ ಸರ್ಕಾರಗಳು ಜೀತದಾಳುಗಳಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗಬೇಕು ಎಂದು ತಿಳಿಸಿದರು.

ಗೀತೆಗಳ ಮೂಲಕ ಜಾಗೃತಿ

ಈ ವೇಳೆ ದಲಿತ ಸಂಘಟನೆಯ ಮುಖಂಡರಾದ ಕೆಎನ್ ನರಸಿಂಹಪ್ಪರವರು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಜೀತಗಾರರನ್ನು ಜಾಗೃತಿ ಮೂಡಿಸಿದರು. ಈ ಸಮಯದಲ್ಲಿ ಜೀವಿಕ ಸಂಘಟನೆ ಬಾಗೇಪಲ್ಲಿ ನಾರಾಯಣಸ್ವಾಮಿ ಮತ್ತಿತರರು ಹಲವರಿದ್ದರು.