ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಾಗಿ ಸೂಚನೆ

| Published : Sep 13 2024, 01:42 AM IST

ಸಾರಾಂಶ

ಭೂಮಿ ಕಳೆದುಕೊಂಡ ರೈತರಿಗೆ ಮಾನವೀಯತೆಯ ಆಧಾರದ ಮೇಲೆ ಪರಿಹಾರಕ್ಕಾಗಿ ಅತಿ ಶೀಘ್ರದಲ್ಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು

ಗದಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ನಾಗಾವಿ ಗ್ರಾಮದ ಬಗರ್ ಹುಕುಂ ಸಾಗುವಳಿ ರೈತರು ಭೂಮಿ ಕಳೆದುಕೊಂಡಿದ್ದು, ಪರಿಹಾರಕ್ಕಾಗಿ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ರೈತ ಮುಖಂಡ ಬಸವಣ್ಣೆಪ್ಪ ಚಿಂಚಲಿ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗಿದ್ದು, ಇದನ್ನು ಅರಿತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ರೈತ ಮುಖಂಡರೊಂದಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ,ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಕಳೆದ ಹಲವು ವರ್ಷಗಳಿಂದ ಪರಿಹಾರ ಸಿಗದೆ ಪರದಾಡುತ್ತಿರುವ ಸಂಗತಿಗಳ ಬಗ್ಗೆ ವಿವರಿಸಿ ಈ ಕೂಡಲೆ ಶಾಶ್ವತ ಪರಿಹಾರ ನೀಡಲು ರೈತರ ಪರವಾಗಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ.ಪಾಟೀಲ, ಸಭೆಗೆ ಜಿಲ್ಲಾಧಿಕಾರಿಗಳನ್ನು ಕರೆದು ಮಾತನಾಡಿ, ಬಹು ದಿನದ ರೈತರ ಸಮಸ್ಯೆ ಆಲಿಸಿ, ಈ ಮೊದಲು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಭರವಸೆ ನೀಡಲಾಗಿತ್ತು ಹಾಗೂ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಿರುತ್ತದೆ ಅದರಂತೆ ಈ ಕೂಡಲೆ ಭೂಮಿ ಕಳೆದುಕೊಂಡ ರೈತರಿಗೆ ಮಾನವೀಯತೆಯ ಆಧಾರದ ಮೇಲೆ ಪರಿಹಾರಕ್ಕಾಗಿ ಅತಿ ಶೀಘ್ರದಲ್ಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮಾಜಿ ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ಡಿ.ವೈ.ಎಸ್.ಪಿ ಇನಾಮದಾರ, ಡಿ.ಎಫ್.ಒ ಲೇಖರಾಜ ಮೀನಾ, ಪಿ.ಎಸ್.ಐ.ಜುಲಕಟ್ಟಿ, ರೈತರಾದ ಶಾಂತವ್ವ ಕಕ್ಕೂರ, ಫೀರೊಜ್ ನದಾಫ್, ಹುಸೇನ್ ಹೊಸಮನಿ, ಮೊಹಮ್ಮದಸಾಬ ಶಲವಡಿ, ಶಿವು ಭಜಂತ್ರಿ, ಟಿಪ್ಪು ಸುಲ್ತಾನ ಬೇಲೆರಿ, ಶಶಿಕಲಾ ಆಮಟೆ, ಮಹಾದೇವಪ್ಪ ಬೇವಿನಮರದ, ಧರ್ಮಪ್ಪ ಮಾದರ ಹಾಗೂ ಇನ್ನಿತರರು ಇದ್ದರು.