ಅನಧಿಕೃತ ಮನೆಗಳ ಸಕ್ರಮ ಖಾತೆಗೆ ಸೂಚನೆ

| Published : Jul 23 2024, 12:40 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಕರ್ನಾಟಕ ಭೂ ಕಂದಾಯ 94-ಸಿ ಮತ್ತು 94-ಸಿಸಿ ಅಡಿಯಲ್ಲಿ ಅನಧಿಕೃತ ವಾಸದ ಮನೆಗಳ ಸಕ್ರಮ ಫಲಾನುಭವಿಗಳು ಖಾತೆ ಮಾಡಿಸಿಕೊಳ್ಳಬೇಕು ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು. ಮಹಾಲಿಂಗಪುರ ಪಟ್ಟಣದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯರಾದ ಶೇಖರ ಅಂಗಡಿ ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ ನಿವೇಶನಗಳ ಅಕ್ರಮ ಸಕ್ರಮ, ಕುರಿತಾದ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕರ್ನಾಟಕ ಭೂ ಕಂದಾಯ 94-ಸಿ ಮತ್ತು 94-ಸಿಸಿ ಅಡಿಯಲ್ಲಿ ಅನಧಿಕೃತ ವಾಸದ ಮನೆಗಳ ಸಕ್ರಮ ಫಲಾನುಭವಿಗಳು ಖಾತೆ ಮಾಡಿಸಿಕೊಳ್ಳಬೇಕು ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ತಿಳಿಸಿದರು.

ಮಹಾಲಿಂಗಪುರ ಪಟ್ಟಣದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯರಾದ ಶೇಖರ ಅಂಗಡಿ ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ ನಿವೇಶನಗಳ ಅಕ್ರಮ ಸಕ್ರಮ, ಕುರಿತಾದ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು. ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅಕ್ರಮ, ಸಕ್ರಮ ಕುರಿತಾಗಿ ಹಂಗಾಮಿ ಆದೇಶದ ಪ್ರಕಾರ ಶೀಘ್ರವೇ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ. ಅದರಂತೆ ನಮ್ಮ ಇಲಾಖೆಯ ಸಿಬ್ಬಂದಿ ಸಹ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸಮಿತಿಗೆ ಮನವರಿಕೆ ಮಾಡಿಕೊಟ್ಟರು.

ಸಾಂಕೇತಿಕ ಶುಲ್ಕ:

ಜ.1ರ 2015 ಪೂರ್ವದಲ್ಲಿ ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಈ ಹಂಗಾಮಿ ಆದೇಶದಲ್ಲಿ ಅನುವು ಮಾಡಿಕೊಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ 30-40, 40-60, 50-80 ಚದರ ಅಡಿ ಮನೆಗಳನ್ನು ಸಾಂಕೇತಿಕ ಶುಲ್ಕ ತುಂಬಿ ಸಕ್ರಮಗೊಳಿಸಿಕೊಳ್ಳಬಹುದು. ನಗರ ಪ್ರದೇಶದಲ್ಲಿ 20-30 ಚ.ಅಡಿಗೆ ಸಾಂಕೇತಿಕ ಶುಲ್ಕ ₹ 5 ಸಾವಿರ, ಬಫರ್‌ ಝೋನ್ 30-40 ಕ್ಕೆ ಸಾಂಕೇತಿಕ ಶುಲ್ಕ ₹ 10 ಸಾವಿರ. ಎಸ್ಸಿ,ಎಸ್ಟಿ, ಅಂಗವಿಕಲ, ಮಾಜಿ ಸೈನಿಕರು, ಪೌರ ಕಾರ್ಮಿಕರಿಗೆ ಮೇಲ್ಕಾಣಿಸಿದ ಶುಲ್ಕಗಳಲ್ಲಿ ಅರ್ಧದಷ್ಟು ಭರಣಾ ಮಾಡಬೇಕು. ಇದು ಆದೇಶದ ದಿನಾಂಕದಿಂದ 1 ತಿಂಗಳೊಳಗಾಗಿ ಸಕ್ರಮ ಮಾಡಿಕ್ಕೊಳ್ಳಬಯಸುವವರು ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಮಯದಲ್ಲಿ ಸದಸ್ಯರಾದ ಹಣಮಂತ ನಾವಿ, ನಾಗಲಿಂಗ ಬಡಿಗೇರ, ಮಹಾಲಿಂಗ ಶಿವನಗಿ, ಮಹಾದೇವ ಸಾವಂತ ಮುಂತಾದವರಿದ್ದರು.

----------------------------------------------

ಕೋಟ್‌

ಮಹಾಲಿಂಗಪುರ ಪಟ್ಟಣದ ಬುದ್ಧಿ ಪಿಡಿ, ಕೆಂಗೇರಿಮಡ್ಡಿ, ಕಲ್ಪಡ, ಬಸವನಗರ ಮತ್ತು ಸಮಗಾರ (ಹರಳಯ್ಯ ಸಮಾಜ) ಗಲ್ಲಿಗಳ 1051ಎ ಮತ್ತು 29/1 ಜಮೀನುಗಳ ಕ್ಷೇತ್ರದಲ್ಲಿ ಅಕ್ರಮ, ಸಕ್ರಮ ಹಂಗಾಮಿ ಆದೇಶ ಪಡೆದ ಫಲಾನುಭವಿಗಳು ರಬಕವಿ- ಬನಹಟ್ಟಿ ತಾಲೂಕು ತಹಸೀಲ್ದಾರ್ ಆದೇಶದ ಪ್ರಕಾರ ಮತ್ತು ಸರ್ಕಾರಿ ನಿಯಮಾನುಸಾರವಾಗಿ ಸಾಂಕೇತಿಕ ಶುಲ್ಕ ಭರಣಾ ಮಾಡಿ, ನಂತರ ತಮ್ಮ ಖರ್ಚಿನಿಂದ ಖರೀದಿ ಮಾಡಿಕೊಳ್ಳಬೇಕು. ಈ ಆದೇಶಕ್ಕೆ ತ್ವರಿತವಾಗಿ ಸ್ಪಂದಿಸಿರುವ ಶಾಸಕ ಸಿದ್ದು ಸವದಿ ಮತ್ತು ತಹಸೀಲ್ದಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.

- ಶೇಖರ ಅಂಗಡಿ, ಪುರಸಭೆ ಸದಸ್ಯ, ಮಹಾಲಿಂಗಪುರ