ಸಾರಾಂಶ
ಸಾರ್ವಜನಿಕ ಪ್ರದೇಶಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಪುರಸಭೆ ಅಧಿಕಾರಿಗಳು ಕಟ್ಟಡದ ಮಾಲಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.ಗೋಣಿಕೊಪ್ಪ ಪಟ್ಟಣದಲ್ಲಿ ನಡೆದ ದುರಂತ ಇನ್ನಿತರ ಪ್ರದೇಶಗಳಲ್ಲಿ ಮರುಕಳಿಸದಂತೆ ಸ್ಥಳೀಯ ಆಡಳಿತ ಮನ್ನೆಚರಿಕೆ ವಹಿಸಿದೆ. ದಂಡಿನಪೇಟೆಯಲ್ಲಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸುವಂತೆ ಮಾಲಕರಿಗೆ ಸೂಚನೆ ನೀಡಿದ್ದು ಮುಂದಿನ ಅನಾಹುತಗಳಿಗೆ ತಮ್ಮನ್ನೇ ಹೊಣೆ ಮಾಡಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ವಿಶೇಷವೆಂದರೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಗಣಪತಿ ದೇವಾಲಯದಿಂದ ಪ್ರವಾಸಿ ಮಂದಿರ ತೆರಳುವ ರಸ್ತೆಯಲ್ಲಿ ಪುರಸಭೆಗೆ ಸೇರಿದ ಹಳೆಯ ಕಟ್ಟಡಗಳು ಬಹುತೇಕ ಶಿಥಿಲಗೊಂಡಿದ್ದು ಅಪಾಯದ ಹಂತದಲ್ಲಿವೆ. ಇದರ ಕೆಳಭಾಗ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು ಸುತ್ತಮುತ್ತಲು ದಿನನಿತ್ಯ ನೂರಾರು ನಾಗರಿಕರು ವಾಹನಗಳು ಓಡಾಡುವ ಪ್ರದೇಶವಾಗಿದೆ. ಇವುಗಳನ್ನು ತಕ್ಷಣ ತೆರವುಗೊಳಿಸಿ ಉಂಟಾಗಲಿರುವ ಅಪಾಯವನ್ನು ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ರಸ್ತೆ ಸಮೀಪ ದಂಡಿನಪೇಟೆಯಲ್ಲಿ ನೂರಕ್ಕೂ ಅಧಿಕ ವರ್ಷಗಳ ಹಳೆಯ ಹಂಚಿನ ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳು ಮಾಲಕರಿಗೆ ತೆರವುಗೊಳಿಸಲು ಸೂಚನೆ ನೀಡಿದ್ದಾರೆಂದು ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ತಿಳಿಸಿದ್ದಾರೆ. ಪುರಸಭೆಗೆ ಸೇರಿದ ಕಟ್ಟಡದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.