ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿರುವ ಅಕ್ರಮ ಅಥವಾ ಸಕ್ರಮ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಜಿಲ್ಲಾಡಳಿತ ಸದ್ಯಕ್ಕೆ ನೀಡುವ ಸ್ವಲ್ಪ ಚುರುಕಾಗಿದೆ. ಆದರೆ ರೆಸಾರ್ಟ್‌ ಹಾಗೂ ಹೋಂ ಸ್ಟೇ ತೆರವಿಗೆ ಮುಂದಾಗಲಿ.

- ಶಿವಪುರ ಮಹದೇವಪ್ಪ, ಜಿಲ್ಲಾಧ್ಯಕ್ಷ ರೈತಸಂಘ

---

ರೈತರ ಪ್ರತಿಭಟನೆ ಉದ್ದೇಶ:

- ಅಕ್ರಮ ಹೋಂ ಸ್ಟೇ, ರೆಸಾರ್ಟ್‌ಗಳಿಂದ ವನ್ಯಮೃಗಗಳು ಮತ್ತೆ ಹಳ್ಳಿ ಎಡೆಗೆ ಪ್ರಯಾಣ


- ರೆಸಾರ್ಟ್‌, ಹೋಂ ಸ್ಟೇಗಳಿಂದಾಗಿ ರೈತರ ದಿನನಿತ್ಯದ ಚಟುವಟಿಕೆ, ಕೃಷಿಗೆ ತೊಡಕು

- ಸಫಾರಿ ಆರಂಭದಿಂದಲೂ ಕಾಡಿನಲ್ಲಿ ಪ್ರಾಣಿಗಳ ನೆಮ್ಮದಿಗೆ ಧಕ್ಕೆ, ನಾಡಿ ಕಡೆ ಯಾನ

- ಹೋಂ ಸ್ಟೇ, ರೆಸಾರ್ಟ್‌ಗಳಿಂದಾಗಿ ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರದೇಶ ಮಾಲಿನ್ಯ

---

ನೋಟಿಸ್‌ನಲ್ಲಿ ಏನಿದೆ?

- ಹೋಂ ಸ್ಟೇ, ರೆಸಾರ್ಟ್‌ಗಳ ನಿರ್ಮಾಣಕ್ಕೆ ಅಗತ್ಯ ಅನುಪತಿ ಪಡೆಯದೇ ಇರುವುದು

- ಕೃಷಿ ಭೂಮಿ ವ್ಯವಸಾಯೇತರ ಚಟುವಟಿಕೆಗೆ ಭೂಪರಿವರ್ತನೆ ಮಾಡಿಸದಿರುವುದು

- ನೋಟಿಸ್‌ ತಲುಪಿದ 10 ದಿನಗಳ ಒಳಗಾಗಿ ಖುದ್ದು ಹಾಜರಾಗಬೇಕು, ಇಲ್ಲವೇ ಕ್ರಮ

- ಹೋಂ ಸ್ಟೇ ಮಾಲೀಕರು ಖುದ್ದು ಹಾಜರಾಗಿ ಲಿಖಿತ ದಾಖಲೆ ಸಲ್ಲಿಸುವಂತೆ ಸೂಚನೆ

---

ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಅಕ್ರಮ ಹೋಂ ಸ್ಟೇ, ರೆಸಾರ್ಟ್‌ ಮತ್ತು ಸಫಾರಿ ಆರಂಭ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತ ಸಂಘಟನೆಗಳಿಗೆ ಸಿಹಿ ಸುದ್ದಿ ಲಭಿಸಿದೆ. ಸೂಕ್ಷ್ಮ ಪ್ರದೇಶದಲ್ಲಿರುವ 20ಕ್ಕೂ ಹೆಚ್ಚು ಹೋಂ ಸ್ಟೇಗಳಿಗೆ ಜಿಲ್ಲಾಡಳಿತ ನೋಟಿಸ್‌ ನೀಡಿದ್ದು, ಇನ್ನು ಹಲವು ಹೋಂ ಸ್ಟೇ, ರೆಸಾರ್ಟ್‌ಗಳು ರೆಡಾರ್‌ ಕಣ್ಗಾವಲಿನಲ್ಲಿವೆ. ನೋಟಿಸ್‌ ಕೊಟ್ಟವರಿಗೆ 10 ದಿನಗಳ ಒಳಗಾಗಿ ಖುದ್ದು ಹಾಜರಾಗಬೇಕಾಗಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಡಳಿತ ಎಚ್ಚರಿಸಿದೆ.ಮೊದಲ ಹಂತವಾಗಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದ್ದು, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್‌ ಕುಮಾರ್‌ ಮೀನಾ ನೋಟೀಸ್‌ ಜಾರಿ ಮಾಡಿದ್ದಾರೆ. ಇದು ನಿಜಕ್ಕೂ ಅಕ್ರಮ ಹೋಂ ಸ್ಟೇ ನಡೆಸುತ್ತಿದ್ದ ಮಾಲೀಕರಿಗೆ ಆತಂಕ ತಂದಿದೆ.ನೋಟಿಸ್‌ನಲ್ಲಿ ಏನಿದೆ?ತಹಸೀಲ್ದಾರ್‌ ಎಂ.ಎಸ್. ತನ್ಮಯ್‌ ಅವರ ವರದಿಯಾಧರಿಸಿದ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್‌ ಕುಮಾರ್‌ ಮೀನಾ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯೊಳಗಿರುವ ೨೦ಕ್ಕೂ ಹೆಚ್ಚು ಹೋಂ ಸ್ಟೇಗಳ ಮಾಲೀಕರಿಗೆ ನೋಟಿಸ್‌ ನೀಡಿದ್ದಾರೆ. ವ್ಯವಸಾಯದ ಜಮೀನನನ್ನು ವ್ಯವಸಾಯೇತರ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆ ಮಾಡಿಸದೇ ಮತ್ತು ಅರಣ್ಯ ಮತ್ತು ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೇ ಅಕ್ರಮವಾಗಿ ಹೋಂ ಸ್ಟೇ ಉದ್ದೇಶಕ್ಕೆ ಬಳಸುವುದು ಕಾನೂನು ಬಾಹಿರವಾಗಿದೆ.ಕರ್ನಾಟಕ ಭೂ ಕಂದಾಯ ಅಧಿ ನಿಯಮ ೧೯೬೪ ರ ನಿಯಮಗಳನ್ನು ಮತ್ತು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ್ದೀರಾ. ಆದ ಕಾರಣ ಸದರಿ ಜಮೀನಿನ ಮಾಲೀಕರಾದ ನಿಮ್ಮ ವಿರುದ್ಧ ಏಕೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಬಾರದೆಂಬುದಕ್ಕೆ ನಿಮ್ಮ ಲಿಖಿತ ವಿವರಣೆ ಮತ್ತು ದಾಖಲಾತಿಗಳನ್ನು ಈ ನೋಟೀಸ್‌ ತಲುಪಿದ ೧೦ ದಿನಗಳೊಳಗೆ ಖುದ್ದಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ಹಾಜರಾಗಿ ಸಲ್ಲಿಸುವುದು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ನಿಯಮಾನುಸಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.ಉಪ ವಿಭಾಗಾಧಿಕಾರಿಗಳು ಅಕ್ರಮ ಹೋಂ ಸ್ಟೇ ಮಾಲೀಕರಿಗೆ ನೀಡಿರುವ ನೋಟೀಸ್‌ಗಳನ್ನು ಆಯಾಯ ಗ್ರಾಮ ಅಡಳಿತ ಅಧಿಕಾರಿಗಳು (ವಿಎ) ಖುದ್ದು ಜಾರಿ ಮಾಡಿದ್ದಾರೆ.---ರೆಸಾರ್ಟ್‌ಗಳಿಗೂ ಶೀಘ್ರ ‌ನೋಟಿಸ್‌?ಗುಂಡ್ಲುಪೇಟೆ: ಜಿಲ್ಲಾಡಳಿತ ಮೊದಲ ಹಂತದಲ್ಲಿ ಅಕ್ರಮ ಹೋಂ ಸ್ಟೇಗಳಿಗೆ ಬ್ರೇಕ್‌ ಹಾಕಲು ನೋಟಿಸ್‌ ನೀಡುವ ಮೂಲಕ ದಿಟ್ಟ ಹೆಜ್ಜೆ ಇರಿಸಿದ್ದು, ಬಂಡೀಪುರ ಸುತ್ತ ಮುತ್ತಲಿನ ರೆಸಾರ್ಟ್‌ಗಳಿಗೂ ನೋಟಿಸ್‌ ನೀಡಲಿದ್ದಾರೆ ಎನ್ನಲಾಗಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿನ ರೆಸಾರ್ಟ್‌ಗಳು ಅನುಮತಿ ಪಡೆದಿದ್ದರೂ ಬಹುತೇಕ ಎಲ್ಲಾ ನಿಯಮ ಉಲ್ಲಂಘಿಸಿವೆ ಎಂಬ ಆರೋಪಗಳಿವೆ. ಅಕ್ರಮವಾಗಿ ಹೆಚ್ಚುವರಿ ಕಟ್ಟಡ ಹಾಗೂ ಈಜುಕೊಳ ಹಾಗೂ ಇನ್ನಿತರ ಕಟ್ಟಡಗಳನ್ನು ನಿರ್ಮಿಸಿದ್ದರೆ, ಕ್ರಮ ತೆಗೆದುಕೊಳ್ಳಲಿ ಎಂಬುದು ರೈತರ ಆಗ್ರಹವಾಗಿದೆ.--ನೂತನ ಜಿಲ್ಲಾಧಿಕಾರಿ ಕ್ರಮಕ್ಕೆ ಸ್ವಾಗತಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಿಗೆ ಬ್ರೇಕ್‌ ಹಾಕಲು ನೂತನ ಜಿಲ್ಲಾಧಿಕಾರಿ ಶ್ರೀರೂಪ ಮುಂದಾಗಿರುವುದು ಸಾರ್ವಜನಿಕರು ಸ್ವಾಗತಿಸಿದ್ದಾರೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಮುತ್ತ ಅಣಬೆಗಳಂತೆ ತಲೆ ಎತ್ತಿರುವ ಅಕ್ರಮ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಅಂಕುಶ ಹಾಕಲು ಹೊರಟಿದ್ದು ಒಳ್ಳೆಯ ನಿರ್ಧಾರ, ಜಿಲ್ಲಾಧಿಕಾರಿಗಳ ಈ ನಿರ್ಧಾರಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಾಥ್‌ ನೀಡಲಿ ಎಂದು ಸಲಹೆ ನೀಡಿದ್ದಾರೆ.

---