ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ಅವಧಿ ಮುಗಿದ ಹೊಸ ಬಡಾವಣೆಗಳಿಗೆ ಮೂಲ ಸೌಲಭ್ಯ ಒದಗಿಸದ ಲೇಔಟ್ ಮಾಲೀಕನಿಗೆ ನೋಟಿಸ್ ನೀಡಿ ಕ್ರಮ ಜರುಗಿಸಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣ ಪುರಸಭೆಯಲ್ಲಿ ಸೋಮವಾರ ನಡೆದ ನಗರ ಮೋಜಣಿ, ನಗರೋತ್ಥಾನ್ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆಯೇ ಸುಮಾರು ಹೊಸ ಬಡಾವಣೆಗಳು ನಿರ್ಮಾಣಗೊಂಡಿವೆ. ಅವುಗಳು ಹೆಸರಿಗೆ ಮಾತ್ರ, ಅಲ್ಲಿ ನೀರು, ರಸ್ತೆ, ವಿದ್ಯುತ್ ಹೀಗೆ ಮೂಲ ಸೌಕರ್ಯಗಳ ಕೊರತೆ ಇದ್ದಲ್ಲಿ ಅಂತಹವುಗಳ ಉತಾರಗಳನ್ನು ಪುರಸಭೆ ಪೂರೈಸುತ್ತಿದೆ ಎಂಬ ಆರೋಪವಿದೆ. ತಕ್ಷಣ ಅಲ್ಲಿ ಎಲ್ಲ ಸೌಲಭ್ಯಗಳು ಇರಬೇಕು. ತಪ್ಪಿದಲ್ಲಿ ಸಂಬಂಧಿಸಿದ ಬಡಾವಣೆ ಮಾಲೀಕನಿಗೆ ನೋಟಿಸ್ ನೀಡಿ ರದ್ದುಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರಮುಖ ರಸ್ತೆಗಳು ಒತ್ತುವರಿಯಿಂದ ಇಕ್ಕಟ್ಟಾದ ಪರಿಣಾಮ, ಅವುಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸುವಲ್ಲಿ ಪುರಸಭೆ ಕ್ರಮ ತೆಗೆದುಕೊಳ್ಳಬೇಕು. ಈ ಕಚೇರಿಯಲ್ಲಿ ಕೆಲ ಸಿಬ್ಬಂದಿ ಬೇಕಾಬಿಟ್ಟಿ ಸೇವೆ ಸಲ್ಲಿಸುತ್ತಿದ್ದು, ಅಂಥವರಿಗೆ ನೋಟಿಸ್ ನೀಡಬೇಕು.ಆಸ್ತಿ ದಾಖಲೆಗಳು ಸರಿಯಾಗಿ ಇಲ್ಲ, ಕೆಲ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಆಸ್ತಿದಾರರಿಗೆ ತೊಂದರೆಯಾಗದಂತೆ ಅಧಿಕಾರಿಗಳ ನಿಗಾ ಇರಲಿ. ಜೊತೆಗೆ ಸಾರ್ವಜನಿಕರು ತುಂಬಿದ ಆಸ್ತಿ ತೆರೆಗೆ ದಾಖಲೆಗಳನ್ನು ಆನ್ಲೈನ್ದಲ್ಲಿ ದಾಖಲಿಸಿ, ಇನ್ನು ಮೇಲೆ ಬರವಣಿಗೆ ಉತಾರ ಪೂರೈಸದೆ ಗಣಕ ಯಂತ್ರದ ಉತಾರ ಪೂರೈಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರೋತ್ಥಾನ ಅಭಿವೃದ್ಧಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಅವಶ್ಯಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.ಪುರಸಭೆ ಸದಸ್ಯರಾದ ಶರಣು ಬೆಲ್ಲದ, ಪರ್ವೇಜ್ ಖಾಜಿ, ಬಸವರಾಜ ಗೋಣ್ಣಾಗರ, ಚಂದ್ರು ತಳವಾರ, ಮೈನು ಧನ್ನೂರ, ಭಾಗ್ಯಶ್ರೀ ಧನ್ನೂರ, ಪುರಸಭೆ ಮುಖ್ಯಾಧಿಕಾರಿಗಳು, ವಿವಿಧ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.