ಸಾರಾಂಶ
ಕಾರ್ಕಡ ಶಾಲಾ ವಠಾರದಲ್ಲಿ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗೆಳೆಯರ ಬಳಗ ಕಾರ್ಕಡ ಸಂಯೋಜಿಸಿದ ೨೧೮ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕೋಟ
ಪರಿಸರದ ಬಗ್ಗೆ ತುಡಿತ ಇದ್ದರೆ ಸಾಲದು, ಅದನ್ನು ನಿತ್ಯ ನಿರಂತರ ಕಾರ್ಯರೂಪಕ್ಕೆ ತರಬೇಕು ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಭಿಪ್ರಾಯಪಟ್ಟರು.ಭಾನುವಾರ ಇಲ್ಲಿನ ಕಾರ್ಕಡ ಶಾಲಾ ವಠಾರದಲ್ಲಿ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಗೆಳೆಯರ ಬಳಗ ಕಾರ್ಕಡ ಸಂಯೋಜಿಸಿದ ೨೧೮ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಿಡ ನಡುವ ಕಾರ್ಯ ವನಮಹೋತ್ಸವದಂದು ಸಾಂಕೇತಿಕವಾಗಿರದೇ, ಪ್ರತಿಯೊಬ್ಬರೂ ನೆಟ್ಟ ಗಿಡಗಳನ್ನು ಪೋಷಿಸಿ ಅದರ ಲಾಭವನ್ನು ನಾಲ್ಕಾರು ಮಂದಿಗೆ ಸಿಗುವಂತೆ ಮಾಡಬೇಕು. ಪ್ರಸ್ತುತ ಅನುಭವಿಸುವ ತಾಪಮಾನವನ್ನು ಸಮತೋಲನಗೊಳಿಸಲು ಹಸಿರು ಅಭಿಯಾನ ಸಹಕಾರಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪ.ಪಂ. ಸದಸ್ಯರಾದ ಸಂಜೀವ ದೇವಾಡಿಗ, ಗಿರೀಜಾ ಪೂಜಾರಿ, ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್, ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ, ಕಾರ್ಯದರ್ಶಿ ಶೀನ ಕಾರ್ಕಡ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿ ಗಿಡವನ್ನು ಕೊಂಡೊಯ್ದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.