ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಜೆಟ್ ಬಳಿಕವೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಭಾನುವಾರ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಈಗ ಅವರೇ ಇದ್ದಾರೆ, ಮುಂದೆ ಅವರೇ ಮುಂದುವರೀತಾರೆ ಎಂದು ಲೆಕ್ಕಾಚಾರ ಅಷ್ಟೇ. ಅರ್ಧಗಿರ್ಧ ಎಂದು ನಾವೆಲ್ಲೂ ಕೇಳಿಲ್ಲ, ಈಗ ಅವರಿದ್ದಾರೆ. ಅವರೇ ಮುಂದುವರೀತಾರೆ ಅನ್ನೋದಷ್ಟೇ ನಮ್ಮ ಲೆಕ್ಕಾಚಾರ. ಮಿಕ್ಕಿದ್ದೆಲ್ಲಾ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರೆ ಬೇರೆ ಕಾರ್ಯಕ್ರಮ ಇರುತ್ತವೆ. ಹಾಗಾಗಿ ದೆಹಲಿಗೆ ಹೋಗ್ತಿವಿ. ಇದೇನು ಹೊಸದಲ್ಲ, ತಿಂಗಳಿಗೊಮ್ಮೆ ದೆಹಲಿ ವಿಸಿಟ್ ಮಾಡೇ ಮಾಡ್ತೀವಿ. ಆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಆಗಿದ್ದೇವೆ. ಸ್ವಾಭಾವಿಕವಾಗಿ ರಾಜಕೀಯ ಮಾತಾಡಬೇಕಾಗುತ್ತದೆ ಮಾತಾಡಿದ್ದೇವೆ. ದೆಹಲಿಯಲ್ಲಿ ನಿರ್ಣಯ ಆಗಿದೆ ಎನ್ನುವ ವಿಚಾರ ಇರುವ ಗೊಂದಲ ಬಗೆಹರಿಸುವ ನಿರ್ಣಯ ಆಗಿದೆ. ರಾಜ್ಯದಲ್ಲಿ ಗೊಂದಲ ಇದೆ ಅದನ್ನ ಬಗೆಹರಿಸಲು ಹೇಳಿದ್ದೇವೆ. ನೀವು ಮಧ್ಯ ಪ್ರವೇಶಿಸಬೇಕು, ಇಲ್ಲವಾದರೆ ಕಾರ್ಯಕರ್ತರಿಗೆ, ಸರ್ಕಾರಕ್ಕೆ, ಪಕ್ಷಕ್ಕೂ ತೊಂದರೆ ಆಗುತ್ತದೆ ಎಂದು ಹೇಳಿದ್ದೇವೆ. ಆದಷ್ಟು ಬೇಗ ಮಾಡುತ್ತೇವೆ ಎಂದು ಖರ್ಗೆಯವರು ಹೇಳಿದ್ದಾರೆ ಎಂದು ಹೇಳಿದರು.