ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಸ್ಥರ ಮತ್ತು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ಬಾಕಿ ಇರುವ ವೇತನವನ್ನು ತುರ್ತಾಗಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಇಲ್ಲಿನ ಜಿಪಂ ಕಚೇರಿ ಮತ್ತು ಜಿಲ್ಲೆಯ ಹನ್ನೆರಡು ತಾಪಂ ಕಚೇರಿಯ ಆವರಣದಲ್ಲಿ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
ಜಿಲ್ಲಾಮಟ್ಟದಲ್ಲಿ ಎಡಿಪಿಸಿ, ಡಿಎಂಐಎಸ್, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು, ಜಿಲ್ಲಾ ಐಇಸಿ ಸಂಯೋಜಕರು, ಡಿಇಒ, ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಂಯೋಜಕರು, ಎಂಐಎಸ್, ಐಇಸಿ ಸಂಯೋಜಕರು, ಆಡಳಿತ ಸಹಾಯಕರು, ಡಿಇಒ, ತಾಂತ್ರಿಕ ಸಹಾಯಕರು ಒಳಗೊಂಡು ಒಟ್ಟಾರೆ 83 ನೌಕರರು ನರೇಗಾ ಹೊರ ಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ 33 ಬಿಎಫ್ಟಿ, 4 ಗ್ರಾಮ ಕಾಯಕ ಮಿತ್ರ ಹಾಗೂ ಒಬ್ಬ ತಾಂಡಾ ರೋಜಗಾರ ಮಿತ್ರ ಸೇರಿ 121 ಸಿಬ್ಬಂದಿ ವೇತನವಿಲ್ಲದೆ ಪರದಾಡುತ್ತಿದ್ದಾರೆ.ಸಂಬಳ ಪಾವತಿ ವಿಳಂಬ ಇದೇ ಮೊದಲಲ್ಲ. ಪ್ರತಿವರ್ಷವೂ ಮೂರ್ನಾಲ್ಕು ತಿಂಗಳು ತಡವಾಗುತ್ತದೆ. ಜಿಪಂ ಅಧಿಕಾರಿಗಳು ಮುತುವರ್ಜಿ ವಹಿಸಿ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ವೇತನ ಪಾವತಿ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಈ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ. ಇದರಿಂದ ವಯಸ್ಸಾದ ಪಾಲಕರ ವೈದ್ಯಕೀಯ ಖರ್ಚು, ಮಕ್ಕಳ ಶೈಕ್ಷಣಿಕ ಖರ್ಚು, ಸಾಲ ಮರುಪಾವತಿ, ಕಿರಾಣಿ- ದಿನಸಿ ಸಾಮಗ್ರಿ ಖರೀದಿ, ದಿನನಿತ್ಯದ ಖರ್ಚು, ಕಾಮಗಾರಿ ಸ್ಥಳಕ್ಕೆ ಹೋಗಿ ಬರಲು ಸಹ ಸಾಕಷ್ಟು ತೊಂದರೆಯಾಗುತ್ತಿದೆ. ಎಲ್ಲದಕ್ಕೂ ಸಾಲ ಮಾಡಬೇಕಾದ ದುಃಸ್ಥಿತಿಯಿದೆ ಎಂದು ಪ್ರತಿಭಟನಾ ನಿರತ ಸಿಬ್ಬಂದಿ ತಮ್ಮ ಸಂಕಟ ತೋಡಿಕೊಂಡರು.
ಇದೇ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರಿಗೆ, ಯೋಜನಾ ನಿರ್ದೇಶಕ ಕರೀಂ ಅಸದಿ ಅವರಿಗೆ ಮತ್ತು ಎಲ್ಲ ತಾಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.ಮನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ವೇತನ ವಿಳಂಬದ ಕುರಿತು ಎರಡು ತಿಂಗಳಿನಿಂದ ಮೌಖಿಕವಾಗಿ ಮತ್ತು ಲಿಖಿತವಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಜತೆಗೆ ಸದ್ಯದಲ್ಲಿ ವೇತನ ಪಾವತಿಸುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಮಟ್ಟದಲ್ಲಿ ಒಂದು ದಿನದ ಶಾಂತಿಯುತ ಪ್ರತಿಭಟನೆ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಸಂಘ ಮತ್ತು ವೇದಿಕೆ ಸಿದ್ದವಿದೆ ಎನ್ನುತ್ತಾರೆ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಕಾರ್ತಿಕ ಹಬ್ಬು.
ಈ ವಿಷಯದ ಗಂಭೀರತೆಯನ್ನು ಆಯುಕ್ತಾಲಯದ ಗಮನಕ್ಕೆ ಈಗಾಗಲೇ ತರಲಾಗಿದೆ. ಶೀಘ್ರದಲ್ಲೇ ಮನರೇಗಾ ಸಿಬ್ಬಂದಿಯ ಬಾಕಿ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಜಿಪಂ ಸಿಇಒ ಈಶ್ವರ್ ಕಾಂದೂ.