ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸ್ವಾವಲಂಬನೆ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ಎಲ್ಎಮ್ ಯೋಜನೆಯು ಸ್ಫೂರ್ತಿ ಸೆಲೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಹೇಳಿದರು.ಜಿಪಂ ನೂತನ ಸಭಾಂಗಣದಲ್ಲಿ ಸೋಮವಾರ ನಡೆದ ಎನ್ಆರ್ಎಲ್ಎಮ್ ಯೋಜನೆಯಡಿ ಮಹಿಳಾ ಉದ್ಯಮಿದಾರರ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮಲ್ಲಿರುವ ಶಕ್ತಿ ಅರ್ಥೈಸಿಕೊಂಡು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ದೇಶ, ರಾಜ್ಯ ಗ್ರಾಮ ಮತ್ತು ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಲು ಎನ್ಆರ್ಎಲ್ಎಮ್ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಂದ ಈಗಾಗಲೇ 5 ಮೊಬೈಲ್ ಕ್ಯಾಂಟಿನ್ ತೆಗೆಯಲಾಗಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿವೆ. ಜಮಖಂಡಿಯಲ್ಲಿ ಸೂಪರ್ ಮಾರ್ಕೆಟ್ ತೆಗೆಯಲಾಗಿದ್ದು ಇತರ ಪ್ರಮುಖ ಸ್ಥಳಗಳಲ್ಲಿ ಸೂಪರ ಮಾರ್ಕೆಟ್ ತೆರೆಯಲು ಸ್ಥಳ ಗುರುತಿಸಲಾಗುತ್ತಿದೆ. ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಅಲ್ಲದೇ ಈ ಯೋಜನೆಯಡಿ ಅಕ್ಕಾ ಕೆಫೆ ತೆರೆಯುವ ಉದ್ದೇಶವಿದ್ದು ಮುಂದಿನ 15 ದಿನಗಳಲ್ಲಿ ಪ್ರಾರಂಭಿಸಲಾಗುವುದು. ಪ್ರತಿ ಗ್ರಾಪಂಗೆ ಒಂದು ಕ್ಯಾಂಟಿನ್ ತೆರೆಯುಲು ಕ್ರಮ ಕೈಗೊಳ್ಳಲಾಗುತ್ತಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಮಾತನಾಡಿ, ಎನ್ಆರ್ಎಲ್ಎಮ್ ಯೋಜನೆ ಉದ್ದೇಶ ಪ್ರತಿ ಕುಟುಂಬದ ಮಹಿಳೆ ಆರ್ಥಿಕ ಸಫಲತೆ ಸಾಧಿಸಿ ತನ್ನ ಕುಟುಂಬದ ನಿರ್ವಹಣೆ ಮಾಡಿಕೊಳ್ಳಬೇಕು. ಸದುಪಯೋಗ ಎಲ್ಲಡೆ ಆಗಬೇಕು ಎಂದು ಹೇಳಿದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿಸದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಉದ್ಯಮಶೀಲತೆ ಅಭಿವೃದ್ಧಿ ಹಾಗೂ ಉದ್ಯಮಿ ನೋಂದಣಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ವಿಜಯ ಕಂಠಿ ಉದ್ಯಮ ನಿಯಮಬದ್ಧಗೊಳಿಸುವಿಕೆ ಹಾಗೂ ಉತ್ಪನ್ನಗಳ ಗುಣಮಟ್ಟತೆ, ಆಗ್ರೋ ಮಾರ್ಕೆಟಿಂಗ್ ಸಮಾಲೋಚಕ ಅಮರ ಕಟ್ಟಿಮನಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಬ್ರ್ಯಾಂಡಿಗ್ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಉದ್ಯಮಿದಾರರಾದ ಗೀತಾ ಕರಬಸಯ್ಯ ಹಂಪಿಹೊಳಿಮಠ, ಶಿವಕ್ಕ ಗೌಡರ, ಸುಜಾತಾ ಪಾಟೀಲ, ಲಿಂಗತ್ವ ಅಲ್ಪಸಂಖ್ಯಾತ ಆನಂದ ಭಜಂತ್ರ, ಶೋಭಾ ಬಿಳ್ಳೂರು, ಮಲ್ಲಮ್ಮ ಮಠಪತಿ, ಕಸ್ತೂರಿ ರಾಠೋಡ, ಹಾಸಂಬಿ ಪಕಾಲಿ, ದಾನಮ್ಮ ಮಂಗಸೂಲಿ ತಮ್ಮ ಅನುಭವದ ಅನಿಸಿಕೆಗಳನ್ನು ಹಂಚಿಕೊಂಡರು.ನಂತರ ಮಹಿಳಾ ಉದ್ಯಮಿದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕೆಆರ್ಡಿಎ ಯೋಜನಾ ನಿರ್ದೇಶಕ ಡಾ.ಪುನಿತ್ ಬಿ.ಆರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಪಂ ಸಹಾಯಕ ಯೋಜನಾಧಿಕಾರಿ ಭಿಮಪ್ಪ ತಳವಾರ ಸ್ವಾಗತಿಸಿ, ಜಿಲ್ಲಾ ವ್ಯವಸ್ಥಾಪಕ ಭಿಮಾನಂದ ಶೆಟ್ಟರ ವಂದಿಸಿಸಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿ ಇತರರಿದ್ದರು.