ಜಿಲ್ಲೆಯಲ್ಲಿನ ವಿಪತ್ತು ನಿರ್ವಹಣಾ ವ್ಯವಸ್ಥೆಯ ಸಿದ್ಧತೆ ಪರಿಶೀಲಿಸುವ ಉದ್ದೇಶದಿಂದ ಅಣಕು ಕಾರ್ಯಾಚರಣೆಯನ್ನು ಡಿ.11ರಂದು ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಡಿಸಿ ಮಾಹಿತಿ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿನ ವಿಪತ್ತು ನಿರ್ವಹಣಾ ವ್ಯವಸ್ಥೆಯ ಸಿದ್ಧತೆ ಪರಿಶೀಲಿಸುವ ಉದ್ದೇಶದಿಂದ ಅಣಕು ಕಾರ್ಯಾಚರಣೆಯನ್ನು ಡಿ.11ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯು ವಿಪತ್ತು ಎದುರಿಸಲು ಎಷ್ಟು ಸಿದ್ಧವಾಗಿದೆ ಎಂಬುದನ್ನು ಎಲ್ಲರಿಗೂ ತಿಳಿಸಲು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಈ ಪೂರ್ವಭಾವಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್‌ನ ನಿರ್ದೇಶನದಂತೆ ಪ್ರತಿ ವರ್ಷವೂ ಜಿಲ್ಲೆಯ ಸಿದ್ಧತೆಗಳನ್ನು ಪರೀಕ್ಷಿಸಲು ಈ ಮಾಕ್ ಡ್ರಿಲ್ ನಡೆಸಲಾಗುತ್ತದೆ. ಈ ಬಾರಿ, ಸೈಕ್ಲೋನ್‌ ಕಾರಣದಿಂದ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನಿಂದ ರೇಡಿಯೇಶನ್ ಸೋರಿಕೆಯಾದ ನಿರ್ದಿಷ್ಟ ಸನ್ನಿವೇಶ ಆಧರಿಸಿ ಕಾರ್ಯಾಚರಣೆ ರೂಪಿಸಲಾಗಿದೆ ಎಂದರು.

ಎನ್‌ಪಿಸಿಐಎಲ್ ನಿರ್ದೇಶನಗಳ ಪ್ರಕಾರ, ಗ್ರಾಪಂ ಮಟ್ಟದಲ್ಲಿ ಹಳ್ಳಿಗಳು ಹೇಗೆ ಸಿದ್ಧರಾಗಬೇಕು ಎಂಬುದರ ಕುರಿತು ಕಾರ್ಯನಿರ್ವಹಿಸಲಾಗುತ್ತದೆ. ರೇಡಿಯೇಶನ್ ಘಟನೆಯ ಸಂದರ್ಭದಲ್ಲಿ ಶೆಲ್ಟರಿಂಗ್ ಅಥವಾ ಆಶ್ರಯ ಪಡೆಯುವುದು ಮುಖ್ಯವಾಗಿದ್ದು, ಆರ್‌ಸಿಸಿ ಮನೆಯೊಳಗೆ ರಕ್ಷಿತ ವಾತಾವರಣದಲ್ಲಿ ಇರಬೇಕಾಗುತ್ತದೆ. ಅಗತ್ಯವಿದ್ದರೆ, ರೇಡಿಯೇಶನ್ ತಡೆಗಟ್ಟಲು ಐಟಿಬಿ ಮಾತ್ರೆಗಳ ವಿತರಣೆಯನ್ನು ಪ್ರಾಯೋಗಿಕವಾಗಿ ತೋರಿಸಲಾಗುತ್ತದೆ. ಅಗತ್ಯಬಿದ್ದರೆ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಹಾಗೂ ಬಾಹ್ಯವಾಗಿ ಆಹಾರ ಸಾಮಗ್ರಿಗಳನ್ನು ಪೂರೈಸುವ ಪ್ರಕ್ರಿಯೆಗಳನ್ನು ಈ ಅಣಕು ಪ್ರದರ್ಶನ ಒಳಗೊಂಡಿದೆ.

ಈ ಕಾರ್ಯಾಚರಣೆಯಲ್ಲಿ ಕಂದಾಯ, ಪೊಲೀಸ್, ಜಿಪಂ, ಅಗ್ನಿಶಾಮಕ, ಅರಣ್ಯ ಮತ್ತು ಆರೋಗ್ಯ ಇಲಾಖೆಗಳು ಸೇರಿಒಟ್ಟು 30ರಿಂದ 34 ಇಲಾಖೆಗಳು ಪಾಲ್ಗೊಂಡಿವೆ. ನ್ಯೂಕ್ಲಿಯರ್ ವಿಪತ್ತು ನಿರ್ವಹಣೆಯಲ್ಲಿ ತರಬೇತಿ ಪಡೆದ ಎನ್‌ಡಿಆರ್‌ಎಫ್ ತಂಡವು ರೇಡಿಯೇಶನ್ ಶುದ್ಧೀಕರಣ (ಡಿಕಂಟ್ಯಾಮಿನೇಷನ್) ಪ್ರಕ್ರಿಯೆಯಲ್ಲಿ ನೆರವು ನೀಡಲಿದೆ. ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಮತ್ತು ಸಲಹೆ ನೀಡಲು 10ರಿಂದ 15 ವೀಕ್ಷಕರು ಆಗಮಿಸಿದ್ದಾರೆ.

ಇದು ಸಂಪೂರ್ಣವಾಗಿ ಅಣಕು ಪ್ರದರ್ಶನವಾಗಿದ್ದು, ಇದರಲ್ಲಿ 60-70 ಆಪ್ತ ಮಿತ್ರ ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ರೇಡಿಯೇಶನ್ ಸಂಬಂಧಿತ ಘಟನೆಗಳು ಜಿಲ್ಲೆಯಲ್ಲಿ ಸಂಭವಿಸದಿದ್ದರೂ, ಸಿದ್ಧರಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂಬ ಉದ್ದೇಶದಿಂದ ಈ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.---ಎನ್‌ಡಿಆರ್‌ಎಫ್‌ ಉಪಕರಣಗಳ ಪ್ರದರ್ಶನ

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಎನ್‌ಡಿಆರ್‌ಎಫ್‌ನ ವಿವಿಧ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಕಾರ್ಯಾಚರಣೆಯ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರಥಮ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ಅಣುವಿಕಿರಣ ಸೋರಿಕೆಯಂತಹ ವಿಪತ್ತು ನಿರ್ವಹಣೆಯ ಸಂದರ್ಭವನ್ನು ಸಿಬ್ಬಂದಿ ವಿವರಿಸಿದರು.

ಈ ಪ್ರದರ್ಶನವನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಪಂ ಸಿಇಒ ಡಾ. ದಿಲೀಶ್ ಶಶಿ ಹಾಗೂ ಕೈಗಾದ ಎನ್‌ಪಿಸಿಐಎಲ್ ಅಧಿಕಾರಿಗಳು ವೀಕ್ಷಿಸಿದರು.

ಬಳಿಕ ಇಲ್ಲಿನ ಪ್ರಜಾಸೌಧ ಕಟ್ಟಡದಲ್ಲಿ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಪ್ರಥಮ ಚಿಕಿತ್ಸಾ ಸಿಬ್ಬಂದಿಯಿಂದ ಅಗ್ನಿ ಅವಘಡದ ಅಣಕು ಕಾರ್ಯಾಚರಣೆ ನಡೆಸಲಾಯಿತು. ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಆವರಿಸಿ ಸಿಬ್ಬಂದಿ ಸಿಲುಕಿಕೊಂಡಿರುವ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಬೆಂಕಿ ನಂದಿಸಿ, ದಟ್ಟ ಹೊಗೆಯಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಿಸಿದರು.

ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಾಚರಣೆಯ ಕೊನೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾಗೆ ಅಗ್ನಿಶಾಮಕ ಅಧಿಕಾರಿಗಳು ಘಟನೆ ಬಗ್ಗೆ ವರದಿ ನೀಡಿದರು.