ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಯಕವೇ ಶ್ರೇಷ್ಠವೆಂದು ಕಾಯಕ ಪರಂಪರೆಗೆ ಶಕ್ತಿ ನೀಡಿದ ಶ್ರೀ ನುಲಿಯ ಚಂದಯ್ಯರ ವಚನಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೊರಮ ಹಾಗೂ ಕೊರಚ ಸಮಾಜದ ಸಹಯೋಗದಲ್ಲಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
48ಕ್ಕೂ ಹೆಚ್ಚು ವಚನ ನೀಡಿದ ಚೇತನರು. ಇವರ ಚಿಂತನೆಗಳು ಸಮಾಜದಲ್ಲಿ ಮುಂದೆ ಸಾಗಬೇಕು. ಎಲ್ಲ ಸಮುದಾಯ ಒಟ್ಟಾಗಿ ಸೇರಿ ನುಲಿಯ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಮಾಡುವ ಮೂಲಕ ಅವರ ಯೋಚನೆ ಮುನ್ನಡೆಸಬೇಕು. ಹುಟ್ಟಿನಿಂದಲೂ ಹಗ್ಗ ಮಾಡುವ ಕೆಲಸ ಮಾಡುತ್ತಿದ ಅವರು ಶೂನ್ಯ ಸಂಪಾದನೆಯಲ್ಲಿ ಕಾಯಕ ಯೋಗ ಮುನ್ನಡೆಸಿದರು. ಇವರ ಸಾಧನೆ ನಮ್ಮೆಲ್ಲರಿಗೆ ಮಾದರಿಯಾಗಿದ್ದು ಅವರ ವಚನಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಬಸವಾದಿ ಶರಣರಾದ ನುಲಿಯ ಚಂದಯ್ಯರು ತಮ್ಮ ಕಾಯಕದಿಂದ ಹೆಸರಾದವರು. ದುಡಿದು ತಿನ್ನಬೇಕು ಎನ್ನುತ್ತಿದ್ದ ಇವರು ತಮ್ಮ ದುಡಿಮೆ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದರು. ಇಂತಹ ಮಹಾನುಭಾವರ ಸಂದೇಶ ನಾವೆಲ್ಲ ಎಲ್ಲೆಡೆ ಪ್ರಚಾರ ಮಾಡಬೇಕು. ರಾಜ್ಯ ಸರ್ಕಾರ ಬಡವರು, ಹಿಂದುಳಿದ ವರ್ಗಗಳ ಏಳೆಗೆಗೆ ಗ್ಯಾರಂಟಿ ಜಾರಿಗೆ ತಂದಿದ್ದು ಅರ್ಹರೆಲ್ಲ ಈ ಯೋಜನೆ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕೆ.ಆರ್.ರವೀಂದ್ರ ಕುಮಾರ್ ಮಾತನಾಡಿ, ಚಂದಯ್ಯರು ಕಾಯಕಯೋಗಿ ಬಸವಣ್ಣನ ಚಿಂತನೆ ಪ್ರಭಾವಕ್ಕೆ ಒಳಗಾಗಿ ಅನುಭವ ಮಂಟಪಕ್ಕೆ ಸೇರುತ್ತಾರೆ. ಹುಲ್ಲು ತಂದು ಹಗ್ಗ ಹೊಸೆದು ಮಾರಿ ಬಂದ ಹಣದಲ್ಲಿ ಜಂಗಮ ದಾಸೋಹ ಮಾಡುತ್ತಿದ್ದರು. ಮಡಿವಾಳ ಮಾಚಯ್ಯ, ಚನ್ನಬಸವಣ್ಣ, ಅಕ್ಕ ನಾಗಮ್ಮ ಹೀಗೆ ಹಲವಾರು ಶರಣರೊಂದಿಗೆ ಕಾಯಕದಲ್ಲಿ ನಿರತರಾಗಿ ಲಿಂಗಧಾರಣೆ ಮಾಡಿ, ಸಸ್ಯಹಾರಿಗಳಾಗಿ ತಮ್ಮ ಕಾಯಕ ಹಾಗೂ ಜಂಗಮ ದಾಸೋಹದಲ್ಲಿ ತೊಡಗುತ್ತಾರೆ. ಕಲ್ಯಾಣ ಕ್ರಾಂತಿ ವೇಳೆ ಶರಣರ ವಚನ ಸುಟ್ಟು ಹಾಕಲಾಗುತ್ತದೆ. ಆಗ ನುಲಿಯ ಚಂದಯ್ಯರು ಕಲ್ಯಾಣ ತ್ಯಜಿಸಿ ಎಣ್ಣೆಹೊಳೆ ನಂತರ ನಂದಿಗ್ರಾಮಕ್ಕೆ ಬಂದು ತಮ್ಮ ವಚನಗಳ ಮೂಲಕ ಶರಣ ತತ್ವ ಸಾರುತ್ತಾರೆ. ತದನಂತರ ನುಲೇನೂರಿನಲ್ಲಿ ಐಕ್ಯವಾಗುತ್ತಾರೆ ಎಂದು ತಿಳಿಸಿದರು.ತಹಸೀಲ್ದಾರ್ ಗಿರೀಶ್ ಮಾತನಾಡಿ, ಶರಣರು ರಚಿಸಿರುವ, ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗುವ ವಚನಗಳಲ್ಲಿರುವ ಸಾರ ನಾವೆಲ್ಲವರೂ ಅಳವಡಿಸಿಕೊಳ್ಳಬೇಕು. ಶಾಲೆ, ಸರ್ಕಾರಿ ಕಚೇರಿ ಮತ್ತು ಮನೆ ಮನೆಗಳಲ್ಲಿ ದಿನಕ್ಕೆ ಒಂದಾದರೂ ವಚನ ಓದು ವಂತಾಗಬೇಕು. ವಚನಗಳು ಶರಣರ ಜೀವಾನುಭವ ತಿಳಿಸುತ್ತದೆ. ಕಾಯಕ ಮಹತ್ವ ಸಾರುತ್ತದೆ. ಇಂತಹ ಮಹಾನುಭಾವರ ಜಯಂತಿಯಂದು ಎಲ್ಲ ಸಮುದಾಯವರು ಒಟ್ಟಿಗೆ ಸೇರಿ ಜಯಂತಿ ಆಚರಿಸಬೇಕು ಹಾಗೂ ಅವರ ಕೆಲವಾದರೂ ತತ್ವ ಅಳವಡಿಸಿ ಕೊಳ್ಳುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಕೊರಮ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಕೀರಪ್ಪ ಭಜಂತಿ ಮಾತನಾಡಿ, ನೂಲು ಹುಣ್ಣಿಮೆ ಪವಿತ್ರ ದಿನದಂದು ಶರಣ ಶ್ರೀ ನುಲಿಯ ಚಂದಯ್ಯರ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆ. ಇಂತಹ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬರಬೇಕು. ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಇನ್ನು ಮುಂದೆ ಸಂಘಟಿತರಾಗಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆಂದು ಆಶಿಸಿದರು.ಜಿಲ್ಲಾ ಕೊರಚರ ಮಹಾಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಚಂದಯ್ಯ ಜಯಂತಿ ಕಾರ್ಯಕ್ರಮದ ಶುಭ ಕೋರಿ, ಸೆ.18ರಂದು ನಗರ ಅಂಬೇಡ್ಕರ್ ಭವನದಲ್ಲಿ ಸಂಘದಿಂದ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಂದು ಯಶಸ್ವಿಗೊಳಿಸಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಇದ್ದರು.