ಶಿರಹಟ್ಟಿ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ನುಲಿಯ ಚಂದಯ್ಯ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

ಶಿರಹಟ್ಟಿ: ನುಲಿಯ ಚಂದಯ್ಯ ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಮಾನವೀಯತೆಯ ಬೆಳಕು ತೋರಿದ ಮಹಾನ್ ಶರಣರಾಗಿದ್ದಾರೆ ಎಂದು ತಹಸೀಲ್ದಾರ್‌ ಕೆ. ರಾಘವೇಂದ್ರ ರಾವು ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ನುಲಿಯ ಚಂದಯ್ಯ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡ ಅವರು, ದುಡಿಮೆಗೆ ಗೌರವ ನೀಡುವ ಜತೆಗೆ ದಾಸೋಹದ ಮಹತ್ವವನ್ನು ಸಮಾಜಕ್ಕೆ ಸಾರಿದರು. ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದ-ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂಬುದು ಶರಣರ ಸಂದೇಶವಾಗಿತ್ತು. ತಾವು ದುಡಿದು ಗಳಿಸಿದ್ದನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವ ಮನೋಭಾವವೇ ನುಲಿಯ ಚಂದಯ್ಯ ಅವರ ದಾಸೋಹದ ವಿಶೇಷತೆ ಎಂದು ಹೇಳಿದರು.ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆಗೆ ಆಸ್ಪದ ನೀಡದೇ ಎಲ್ಲರೂ ಸಮಾನರು ಎಂಬ ಭಾವನೆ ಮೂಡಬೇಕು ಎಂದರು. ನಾರಾಯಣ ಗುರುಗಳು ಉನ್ನತವಾದ ಆದರ್ಶವನ್ನು ಕೇವಲ ಮಾತುಗಳಲ್ಲಿ ಮಾತ್ರ ಅಲ್ಲ, ಅದನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತೋರಿಸಿದ್ದಾರೆ ಎಂದರು.

ಉಪ ನೋಂದಣಾಧಿಕಾರಿ ಶರಣಪ್ಪ ಪವಾರ, ಸಂತೋಷ ಅಸ್ಕಿ, ವಿನೋದ ಪಾಟೀಲ, ನುಲಿಯ ಚಂದಯ್ಯ ಸಮಾಜದ ಅಧ್ಯಕ್ಷ ಗಿರೀಶ ಭಜಂತ್ರಿ, ಮಾರುತಿ ಭಜಂತ್ರಿ, ಮಂಜುನಾಥ ಭಜಂತ್ರಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಅಧ್ಯಕ್ಷ ಪರಶುರಾಮ ಈಳಗೇರ, ಕಲ್ಲಪ್ಪ ಈಳಗೇರ, ಶ್ರೀಕಾಂತ ಈಳಗೇರ, ಶರಣಪ್ಪ ಈಳಗೇರ್ ಇದ್ದರು.