ಕಾದಂಬರಿ ಬರೆಯುವವರ ಸಂಖ್ಯೆ ಕ್ಷೀಣ

| Published : Jun 05 2025, 03:16 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕಾದಂಬರಿ ಬರೆಯುವವರ ಸಂಖ್ಯೇ ಕ್ಷೀಣಿಸುತ್ತಿದ್ದು ಯುವಪೀಳಿಗೆಯು ಕಾದಂಬರಿ ರಚನೆಯತ್ತ ತೊಡಗಬೇಕು.

ಕುಷ್ಟಗಿ:

ಇತ್ತೀಚಿನ ದಿನಗಳಲ್ಲಿ ಕಾದಂಬರಿ ಬರೆಯುವವರ ಸಂಖ್ಯೇ ಕ್ಷೀಣಿಸುತ್ತಿದ್ದು ಯುವಪೀಳಿಗೆಯು ಕಾದಂಬರಿ ರಚನೆಯತ್ತ ತೊಡಗಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಗೇರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯುವ ಸಾಹಿತಿ ಮೌನೇಶ ನವಲಹಳ್ಳಿ ಅವರ ನೀಲಿ ಹೊತ್ತಿಗೆ ಕಾದಂಬರಿ ಅವಲೋಕನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಸಂಗಾತ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ, ಯುವ ಸಾಹಿತಿಗಳಿಗೆ ಇನ್ನೂ ಹೆಚ್ಚಿನ ಅಧ್ಯಯನಬೇಕು ಎಂದರು.

ಯುವ ಸಾಹಿತಿ ಮೌನೇಶ ನವಲಳ್ಳಿ ಮಾತನಾಡಿ, ನೀಲಿ ಹೊತ್ತಿಗೆ ಕಾದಂಬರಿ ಅವಲೋಕನ ಕಾರ್ಯಕ್ರಮ ಜೂ. 8ರಂದು ಪಟ್ಟಣದ ಬಸವ ಭವನದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ಕಾದಂಬರಿ ಕುರಿತು ಅಭಿಪ್ರಾಯ ಮಂಡಿಸಲು ಆಸಕ್ತ ಲೇಖಕರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಕಾದಂಬರಿ ಅವಲೋಕನ ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹ ಅಧೀಕ್ಷಕ ಡಾ. ಐ.ಜಿ. ಮ್ಯಾಗೇರಿ, ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಾಸ್ತಾವಿಕವಾಗಿ ಅಕ್ಷರ ಸಂಗಾತದ ಸಂಪಾದಕ ಟಿ.ಎಸ್. ಗೋರವರ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಪರಿಷತ್ತಿನ ವೇದಿಕೆ ಇರುವುದು ಸಾಹಿತ್ಯದ ಕಾರ್ಯಕ್ರಮ ಆಯೋಜಿಸಲು. ಬರಹಗಾರರು, ಸಾಹಿತಿಗಳಿಗೆ ಪರಿಷತ್ತಿನ ಬೆಂಬಲ ಸದಾ ಇರುತ್ತದೆ. ಮೌನೇಶ ಅವರ ಕಾದಂಬರಿ ಅವಲೋಕನ ಸಮಾರಂಭದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.

ರವಿಂದ್ರ ಬಾಕಳೆ ಪ್ರಾಸ್ತಾವಿಕ ಮಾತನಾಡಿದರು, ಕಸಾಪ ಗೌರವ ಕಾರ್ಯದರ್ಶಿ ಶರಣಪ್ಪ ಲೈನದ, ದೇವರಾಜ ವಿಶ್ವಕರ್ಮ ಉಪಸ್ಥಿತರಿದ್ದರು.