ಕನ್ನಡಪ್ರಭ ವಾರ್ತೆ ಹಾಸನಪ್ರತಿದಿನ ತಮ್ಮ ಸೇವೆಯಲ್ಲಿ ಸಾರ್ಥಕತೆಯನ್ನು ಕಾಣುತ್ತರುವ ದಾದಿಯರ (ಶುಶ್ರೂಷಕರು) ಸೇವೆ ಅಪಾರ, ಇವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕರು ಹಾಗೂ ಸಂಜೀವಿನಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಎಚ್. ಪಿ ಸ್ವರೂಪ್ ಪ್ರಕಾಶ್‌ ಶ್ಲಾಘಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿ., ಹಾಸನ ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಹಕಾರ ಆಸ್ಪತ್ರೆಯ ಸಿಬ್ಬಂದಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರ ಕ್ಷೇತ್ರದಲ್ಲಿ ಸಹಕಾರ ತತ್ವಗಳಿಗೆ ಅನುಗುಣವಾಗಿ ಇಡೀ ರಾಜ್ಯದಲ್ಲಿರುವ ಎರಡು ಸಹಕಾರ ಆಸ್ಪತ್ರೆಗಳಲ್ಲಿ ನಮ್ಮ ಸಂಜೀವಿನಿ ಸಹಕಾರಿ ಆಸ್ಪತ್ರೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ಕಾರಣಕರ್ತರು ಇಲ್ಲಿನ ಸಿಬ್ಬಂದಿ, ವೈದ್ಯರು, ಆಡಳಿತ ಮಂಡಳಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಸ್. ಎನ್. ಪ್ರಕಾಶ್‌ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಸುಮಾರು 30ರಿಂದ 35 ರೀತಿಯಾದ 2000 ಸಹಕಾರ ಸಂಘಗಳಿದ್ದು, ಅದರಲ್ಲಿ ನಮ್ಮ ಜಿಲ್ಲೆಯ ಸಂಜೀವಿನಿ ಸಹಕಾರ ಆಸ್ಪತ್ರೆಯು ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಸಹಕಾರ ತತ್ವದಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಆಸ್ಪತೆಯು ಬಡವರಿಗೆ ಕೂಲಿ ಕಾರ್ಮಿಕರಿಗೆ, ಸಹಕಾರಿಗಳಿಗೆ ಉತ್ತಮವಾದ ಅತಿ ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿದೆ. ಇಂತಹ ಆಸ್ಪತ್ರೆಯ ಸಿಬ್ಬಂದಿಗೆ ಅಂತಾರಾಷ್ಟ್ರೀಯ ದಾದಿಯರ ದಿನವಾದ ಇಂದು ತರಬೇತಿ ನೀಡುತ್ತಿರುವುದು ನಮಗೆ ಸಂತೋಷವಾಗಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಆರ್‌. ಟಿ. ದ್ಯಾವೇಗೌಡ, ಜಿಲ್ಲಾ ಸಹಕಾರ ಕೇಂದ್ರಬ್ಯಾಂಕಿನ ನಿರ್ದೇಶಕ ಕೆ.ಎಸ್. ಮಂಜೇಗೌಡ ಒಕ್ಕೂಟದ ಉಪಾಧ್ಯಕ್ಷ ಡಿ.ಬಿ. ಸೋಮೇಗೌಡ, ನಿರ್ದೇಶಕರಾದ ನಾಗರಾಜು, ಪುಟ್ಟಸ್ವಾಮಿಗೌಡ, ಪದ್ಮರಾಜು, ಪ್ರವೀಣ್, ಸೋಮಣ್ಣ, ಸಿದ್ದೇಶ್‌ ಹಾಗೂ ಸಂಜೀವಿನಿ ಸಹಕಾರ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.