ಸಾರಾಂಶ
ಸೋಮವಾರಪೇಟೆ: ದೊಡ್ಡಮಳ್ತೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಅಂಗನವಾಡಿ ಕಾರ್ಯಕರ್ತರು ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಆರೋಗ್ಯವಂತ ಮಗು ದೇಶದ ಸಂಪತ್ತು ಎಂದು ಭಾವಿಸಲಾಗಿದೆ. ಮಗು ಆರೋಗ್ಯವಾಗಿರಬೇಕಾದರೆ ತಾಯಿ ಕೂಡ ಪೌಷ್ಠಿಕ ಆಹಾರವನ್ನು ಸೇವಿಸಲೇಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹೇಳಿದರು. ಆರೋಗ್ಯ ಸುರಕ್ಷಾಧಿಕಾರಿ ದಿವ್ಯ ಮಾತನಾಡಿ, ಮಹಿಳೆಯರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಸದುದ್ದೇಶದಿಂದ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪೌಷ್ಟಿಕಾಂಶವಿರುವ ಆಹಾರಗಳನ್ನು ಉಪಯೋಗಿಸಬೇಕು. ಈ ಬಗ್ಗೆ ಅಂಗವಾಡಿ ಕೇಂದ್ರಗಳಲ್ಲಿ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ. ಗರ್ಭಿಣಿಯರು ಅತೀ ಹೆಚ್ಚಿನ ಎಚ್ಚರಿಕೆ ವಹಿಸಿ, ಉತ್ತಮ ಆಹಾರವನ್ನು ಉಪಯೋಗಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯೆ ಎಚ್.ಪಿ. ಪ್ರಮೀಳ, ಅಂಗನವಾಡಿ ಕಾರ್ಯಕರ್ತೆ ಸವಿತಾ, ಆಶಾ ಕಾರ್ಯಕರ್ತರಾದ ಈಶ್ವರಿ, ಶೈಲಾ, ಕುಸುಮಾ, ಕರವಸೂಲಿಗಾರ ವಿಶ್ವರೂಪಚಾರ್ ಇದ್ದರು.