ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮಾಜಿ ಪ್ರಧಾನಿ ಮನಮೋಹನ ಸಿಂಗ್ ದೇಶ ಕಂಡ ಒಬ್ಬ ಶ್ರೇಷ್ಟ ಅರ್ಥ ಶಾಸ್ತ್ರಜ್ಞರಾಗಿದ್ದರು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ರಾಜಕೀಯ ಮುತ್ಸದ್ದಿಯಾಗಿದ್ದ ಮನಮೋಹನ ಸಿಂಗ್ ಅವರು ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ಕೊಟ್ಟವರು ಎಂದಿರುವ ಅವರು ಸಿಂಗ್ ಅವರ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ ಎಂದಿದ್ದಾರೆ. ಅವರ ಅರ್ಥಶಾಸ್ತ್ರದ ವಿಚಾರಗಳು ಕೇವಲ ನಮ್ಮ ದೇಶ ಅಷ್ಟೇ ಅಲ್ಲ. ಇಡೀ ಪ್ರಪಂಚವೇ ಮೆಚ್ವಿಕೊಂಡಿದೆ. ಬರಾಕ್ ಓಬಾಮಾ ಕೂಡ ಅವರನ್ನು ಗುರುಗಳು ಎಂದು ಭಾವಿಸಿ ಬಂದಿದ್ದರು ಎಂದಿದ್ದಾರೆ. ಪಿ.ವಿ ನರಸಿಂಹರಾವ್ ಸಂಪುಟದಲ್ಲಿ ಇವರು ಹಣಕಾಸು ಮಂತ್ರಿಗಳಾಗಿ ಬಹುದೊಡ್ಡ ಬದಲಾವಣೆ ತಂದಿದ್ದರು. ಖಾಸಗೀಕರಣ, ಜಾಗತೀಕರಣ ನೀತಿ ತಂದು ಆರ್ಥಿಕ ಸುಧಾರಣೆ ಮಾಡಿದವರು.ನರೇಗಾ ಯೋಜನೆಯ ಪರಿಕಲ್ಪನೆಯಡಿ ಉದ್ಯೋಗ ಸೃಷ್ಟಿ ಮಾಡಿ. ಆರ್ಥಿಕ ಸಬಲತೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲಬೇಕು. ಜೊತೆಗೆ ವಿಜ್ಞಾನ ಅಣು ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ. ಸರಳ ಜೀವನ ನಡೆಸಿ ದೇಶದ ಅತ್ಯುನ್ನತ ಪ್ರಧಾನಿ ಎಂದು ಜನಮೆಚ್ಚುಗೆ ಪಡೆದವರು ಎಂದಿರುವ ಶ್ರೀಗಳು, ಸಿಂಗ್ ಅವರ ಕೊಡುಗೆಗಳು ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದಿದ್ದಾರೆ. ಅವರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರ ಸೀಮಿತ ಅಲ್ಲ. ಇಡೀ ದೇಶಕ್ಕೆ ಅವರ ಅಗಲಿಕೆಯಿಂದ ದುಃಖ ಉಂಟಾಗಿದೆ ಎಂದಿದ್ದಾರೆ.