ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಸಂವಿಧಾನದಲ್ಲಿ ದೇಶದ ಪ್ರಜೆಗಳಿಗೆ ವಿವಿಧ ಹಕ್ಕು ನೀಡಲಾಗಿದೆ, ಅವುಗಳನ್ನು ಪಡೆಯುವಂತೆ ಸಂವಿಧಾನದಲ್ಲಿ ನೀಡಲಾದ ಕರ್ತವ್ಯ ಸಾಲಿಸುವುದು ಸಹ ನಮ್ಮ ಕರ್ತವ್ಯವಾಗಿದೆ. ಚಿಕ್ಕ ಚಿಕ್ಕ ಕರ್ತವ್ಯಗಳನ್ನು ಪಾಲಿಸುವುದೂ ಸಹ ಸಂವಿಧಾನ ಗೌರವಿಸಿದಂತೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹನಮರಟ್ಟಿ ಹೇಳಿದರು.ಖಜ್ಜಿಡೋಣಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ, ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಧವನ್ನು ಹಿಡಿದು ಹೋರಾಡುವವರನ್ನು ಸೋಲಿಸಬಹುದು. ಆದರೆ ಪುಸ್ತಕವನ್ನು ಹಿಡಿದು ಹೋರಾಡುವವರನ್ನು ಸೋಲಿಸಲಾಗದು. ಸಂವಿಧಾನ ಪುಸ್ತಕ ಸೇರಿದಂತೆ ವಿವಿದ ಪುಸ್ತಕಗಳನ್ನು ಓದುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನಾರ್ಜನೆ ಹೆಚ್ಚುತ್ತದೆ, ವಿಷಯ ಜ್ಞಾನ ತಿಳಿಯುತ್ತದೆ, ಮನೆಯ ಮುಂದಿನ ರಸ್ತೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ನೀರನ್ನು ಪೋಲು ಮಾಡದಿರುವುದು, ಪೋಲು ಮಾಡುತ್ತಿರುವವರಿಗೆ ತಿಳಿವಳಿಕೆ ಹೇಳುವುದು ಒಂದು ಕರ್ತವ್ಯವಾಗಿದ್ದು, ಇದನ್ನು ಪಾಲಿಸಿದಲ್ಲಿ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತೆ, ಸಂವಿಧಾನ ಗೌರವಿಸುವುದು ಎಂದರೆ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದರೆ ಮಾತ್ರ ಅಂದುಕೊಳ್ಳಬಾರದು, ರಸ್ತೆ, ಸರ್ಕಾರಿ ಆಸ್ತಿ ಪಾಸ್ತಿ, ಮಹಿಳೆಯರನ್ನು ಗೌರವಿಸುವುದು, ಸ್ವಾತಂತ್ರ್ಯವೀರ ಹೋರಾಟಗಾರರನ್ನು ಗೌರವಿಸುವುದು ಮಹಾನ್ ವ್ಯಕ್ತಿಗಳ ತತ್ವ ಆದರ್ಶ ಪಾಲನೆ, ಸರ್ಕಾರದ ಆಸ್ತಿ ರಕ್ಷಣೆ ನಮ್ಮೆಲ್ಲರ ಹೊಣೆ. ಸಂವಿಧಾನ ಆಶಯವನ್ನು ಎಲ್ಲರೂ ಎತ್ತಿ ಹಿಡಿಯಬೇಕು, ಸರ್ಕಾರದ ಆಸ್ತಿ ರಕ್ಷಣೆ, ಕರ್ತವ್ಯಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದರು.
ಇದಕ್ಕೂ ಮೊದಲು ಖಜ್ಜಿಡೋಣಿ ಗ್ರಾಮಕ್ಕೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾ ವಾಹನಕ್ಕೆ ಗಣ್ಯರು, ಅಧಿಕಾರಿಗಳು, ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು, ಗ್ರಾಮ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸಂವಿಧಾನ ಜಾಗೃತಿ ಮೂಡಿಸಲಾಯಿತು, ಶಾಲಾ ವಿದ್ಯಾರ್ಥಿಗಳು ಮಹಾತ್ಮಾ ಗಾಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಭಗತಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ಲಕ್ಷ್ಮೀಬಾಯಿ, ಒನಕೆ ಓಬವ್ವ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದ ಪುಟ್ಟ ಮಕ್ಕಳು ಗಮನ ಸೆಳೆದರು. ಜಾಥಾದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಗಣ್ಯರು, ಮುಖಂಡರು ಭಾಗವಹಿಸಿದ್ದರು.