ಪ್ರತಿಭಟಿಸಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದಾರೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಚಿಕ್ಕಮಗಳೂರು ತಾಲೂಕಿನ ಹ್ಯಾರಂಬಿ ಪುರದಲ್ಲಿ ಕಾಡಾನೆ ತುಳಿತದಿಂದ ಕಾರ್ಮಿಕ ಮಹಿಳೆ ಬೋರಮ್ಮ ಸಾವನ್ನಪ್ಪಿದ ಬಳಿಕ ಆಕೆ ಶವವನ್ನು ಅವರ ಕುಟುಂಬಸ್ಥರು ಹಾಗೂ ಅರಣ್ಯ ಇಲಾಖೆಯವರು ತರುವಾಗ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಶವವನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ಬಾಳೆಹೊನ್ನೂರು ಠಾಣೆಯಲ್ಲಿ 9 ಜನ ಹೋರಾಟಗಾರರ ಮೇಲೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ.ಚಂದ್ರಶೇಖರ್ ರೈ ಹೊನ್ನೇಕೊಪ್ಪ, ಅಭಿಷೇಕ್ ಹೊಸಳ್ಳಿ, ಮಂಜು ಶೆಟ್ಟಿ ಕಡಬಗೆರೆ, ಪ್ರವೀಣ್ ಖಾಂಡ್ಯ, ಆದರ್ಶ ಕುಂಬರಗೋಡು, ಕಾರ್ತಿಕ್ ಅಳೇಹಳ್ಳಿ, ಪುರುಷೋತ್ತಮ ಕೂಸ್ಕಲ್, ಸಚಿನ್ ಮೂಡುಬಾಗಿಲು, ಧನಂಜಯ್ ವರ್ಕಟ್ಟೆ ಎಂಬುವವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದ್ದು, ಪ್ರಕರಣದಲ್ಲಿ ಇನ್ನೂ 20ಕ್ಕೂ ಹೆಚ್ಚು ಜನರು ಇದ್ದಾರೆ ಎಂದು ನಮೂದಿಸಿದ್ದಾರೆ. ಆರೋಪಿತರು ಕಡಬಗೆರೆಯಲ್ಲಿ ಮೃತಳ ಶವವಿರುವ ವಾಹನವನ್ನು ಬಲವಂತವಾಗಿ ಅಡ್ಡಗಟ್ಟಿ , ರಸ್ತೆ ತಡೆ ಮಾಡಿ ಮಹಿಳೆ ಶವವನ್ನು ರಸ್ತೆ ಮೇಲಿಟ್ಟು ಪ್ರತಿಭಟಿಸಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಚಿಕ್ಕಮಗಳೂರು-ಬಾಳೆಹೊನ್ನೂರು ರಸ್ತೆ ಸಂಪೂರ್ಣ ಬಂದ್ ಮಾಡಿ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರು. ಸ್ಥಳಕ್ಕೆ ಜಿಲ್ಲಾಧಿ ಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿಗಳು ಬಂದು ಪರಿ ಹಾರದ ಚೆಕ್ಕನ್ನು ಮೃತರ ಕುಟುಂಬಕ್ಕೆ ಕೊಡಲು ಮುಂದಾದಾಗ ಘೋಷಣೆ ಕೂಗುತ್ತ ನಿಮ್ಮ ₹20 ಲಕ್ಷ ಬೇಡ, ₹50 ಲಕ್ಷ ಬೇಕು ಎಂದು ಪೊಲೀಸರನ್ನು ಹೊರ ದಬ್ಬಲು ಮುಂದಾಗಿದ್ದಲ್ಲದೆ ಶವವನ್ನು ಸಂಬಂಧಿಕರು ಕೊಂಡು ಹೋಗುವುದನ್ನು ತಡೆದು, ಕತ್ತಲೆಯಾಗುತ್ತಿದ್ದಂತೆ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಕೊಪ್ಪ ಪಿಎಸ್ಐ ಮಧು, ಪೊಲೀಸ್ ಸಿಬ್ಬಂದಿ ರೇಖಾ, ಜಯರಾಮೇಗೌಡ, ಮಂಜುನಾಥ, ಭೀಮಸೇನ ಕಣಬೂರು, ಹನು ಮಂತ ಗುಡದಿನ್ನಿ, ರಘುನಾಯ್ಕ, ಶಿವಾನಂದ, ಯುವರಾಜ ಅವರಿಗೆ ರಕ್ತ ಗಾಯಗಳಾಗಿದ್ದು, ಆರೋಪಿತರ ಗುಂಪು ಬಂದೋ ಬಸ್ತ್ಗೆ ಬಂದಿದ್ದ ಸಶಸ್ತ್ರ ಮೀಸಲು ಪಡೆ ವಾಹನ ಬಲವಾಗಿ ಎತ್ತಿ ಬೀಳಿಸಲು ಪ್ರಯತ್ನಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ 20 ಜನ ಇತರರು ಎಂದು ದಾಖಲಿಸಿದ್ದು, ಸುತ್ತಮುತ್ತಲಿನ ವಿಡಿಯೋ ಫೂಟೇಜ್ಗಳನ್ನು ಪರಿಶೀಲಿಸಿ ಮತ್ತಷ್ಟು ಜನರ ಮೇಲೆ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
(ಬಾಕ್ಸ್)ಲಾಠಿ ಚಾರ್ಜ್ ಆಗಿಲ್ಲ: ಎಸ್ಪಿ ಜೀತೇಂದ್ರ ಕುಮಾರ್ ದಯಾಮಬಾಳೆಹೊನ್ನೂರು: ಕಾಡಾನೆ ದಾಳಿಗೆ ಮಹಿಳೆ ಬಲಿ ಹಿನ್ನೆಲೆ ನಡೆದ ಪ್ರತಿಭಟನೆಯಲ್ಲಿ ಭಾನುವಾರ ಯಾವುದೇ ಲಾಠಿ ಚಾರ್ಜ್ ಆಗಿಲ್ಲ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹೇಳಿದ್ದಾರೆ.ಘಟನೆ ಕುರಿತಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 2 ಎಫ್ಐಆರ್ ದಾಖಲಾಗಿದ್ದು, ಭಾನುವಾರ ಯಾವುದೇ ಲಾಠಿ ಚಾರ್ಜ್ ಆಗಿಲ್ಲ. ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿದಾಗ ಗುಂಪು ಚದುರಿಸಲಾಗಿದೆ.ಈ ಪ್ರಕ್ರಿಯೆಯಲ್ಲಿ ಒಬ್ಬರು ಮಹಿಳಾ ಪೇದೆ ಸೇರಿದಂತೆ ಆರು ಮಂದಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೊಂಬಿ, ಗಲಾಟೆ, ರಸ್ತೆ ತಡೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಪೊಲೀಸರ ಮೇಲೆ ಹಲ್ಲೆ ಕುರಿತು ಪ್ರಕರಣ ದಾಖಲು ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.