ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ 2ನೇ ದಿನವಾದ ಮಂಗಳವಾರ ಗ್ರಾಮ ದೇವತೆಯರು ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲಿ ನೈವೇದ್ಯ ಅರ್ಪಣೆ ಜರುಗಿತು.ಬೆಳಗ್ಗೆ 3 ಗಂಟೆಯಿಂದಲೇ ಪ್ರಾರಂಭವಾದ ಪುರ ಜನತೆಯ ನೈವೇದ್ಯ ಅರ್ಪಣೆ ಕಾರ್ಯಕ್ರಮದ ಸಂಜೆಯವರೆಗೂ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಕ್ತಿ ಭಾವದಿಂದ ಶ್ರೀದೇವಿಯರಿಗೆ ನೈವೇದ್ಯ ಅರ್ಪಿಸಿ ದೇವಿಯರ ಅನುಗ್ರಕ್ಕೆ ಪಾತ್ರರಾದರು. ನಗರದ ಎರಡು ಮಹಾಲಕ್ಷ್ಮೀದೇವಿಯರಿಗೆ ಬೆಳಗ್ಗೆ 6 ರಿಂದ 8 ರವರೆಗೆ ಅಭಿಷೇಕ ಮತ್ತು ವಿಶೇಷ ಪೂಜಾ ಸಮಾರಂಭ ಜರುಗಿತು. ಸಂಜೆ 4 ರಿಂದ ಮಹಾಲಕ್ಷ್ಮೀ ದೇವಿಯರ ಪಲ್ಲಕ್ಕಿ ಹಾಗೂ ಮುತ್ತೈದೆಯರು ಮತ್ತು ಪುರ ಜನತೆ ಕೂಡಿ ಊರೋಳಗಿನ ಮಹಾಲಕ್ಷ್ಮೀ ದೇವಸ್ಥಾನದಿಂದ ಸಕಲ ವಾದ್ಯಮೇಳದೊಂದಿಗೆ ವಿಜೃಂಭಣೆಯಿಂದ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ದ್ಯಾಮವ್ವನ ಗುಡಿಗೆ ಆಗಮಿಸಿ ಪುನಃ ಮಹಾಲಕ್ಷ್ಮೀ ಗುಡಿಗೆ ತಲುಪಿತು. ನಗರದ ಎಲ್ಲೆಡೆ ಮಹಿಳೆಯರು ಮಕ್ಕಳು ದೇವ ಮಂದಿರಗಳಲ್ಲಿ ಕಂಡು ಬಂದರು. ನೈವೇದ್ಯ ಅರ್ಪಣೆ ಮತ್ತು ಉಡಿ ತುಂಬುವ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ಗಳನ್ನು ಅಳವಡಿಸಿ ಸುವ್ಯವಸ್ಥೆಯಿಂದ ದೇವಿಯರ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದರು. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರ ಜನರಿದ್ದರು. ಶಾಂತಿಯುತವಾಗಿ ಭಕ್ತಿಭಾವದಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ನಗರದಲ್ಲಿ ಟ್ರಾಫೀಕ್ ಸಮಸ್ಯೆಯಾಗದಂತೆ ಪ್ರಮುಖ ದೇವಾಲಗಳಿಗೆ ಸಾಗುವ ರಸ್ತೆಗಳಿಗೆ ಸುಮಾರು ಅರ್ಧ ಕೀಲೊ ಮೀಟರ್ನಷ್ಟು ಮೊದಲೇ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಒಡಾಟವನ್ನು ನಿಷೇಧಿಸಲಾಗಿತ್ತು.ಶಾಸಕ ಹಾಗೂ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶ ಜಾರಕಿಹೊಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ ಸೇರಿದಂತೆ ಗಣ್ಯರು ಗ್ರಾಮ ದೇವತೆಯರ ದರ್ಶನ ಪಡೆದರು.