ಸಾರಾಂಶ
ಕುಷ್ಟಗಿ: ಸಾರ್ವಜನಿಕ ಸೇವೆಗಳನ್ನು ನೀಡುವಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನಗತ್ಯ ವಿಳಂಬ ಧೋರಣೆ ಅಥವಾ ಅಕ್ರಮ ಆಸ್ತಿ ಗಳಿಸಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಪ್ಪ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಕುಂದು ಕೊರತೆಗಳು ಮತ್ತು ಅಹವಾಲುಗಳ ಸ್ವೀಕಾರ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೆಲಸ ವಿಳಂಬದ ಕುರಿತು ಅಧಿಕಾರಿಗಳ ಮೇಲೆ ದೂರುಗಳು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಯಾವಾಗ ಬೇಕಾದರೂ ಮುಂದಾಗಬಹುದು. ಇದಕ್ಕೆ ನ್ಯಾಯಾಲಯದ ಒಪ್ಪಿಗೆ ಬೇಕಾಗಿಲ್ಲ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸರ್ಕಾರ ವೇತನ ನೀಡುತ್ತದೆ. ಅಧಿಕಾರಿಗಳಾದವರು ಸಾರ್ವಜನಿಕರಿಂದ ಲಂಚ ಪಡೆಯುವುದು, ಅನಗತ್ಯ ವಿಳಂಬ ಧೋರಣೆ, ಜನರನ್ನು ಕಚೇರಿಗಳಿಗೆ ಹೆಚ್ಚು ಅಲೆಸುವುದು ತಪ್ಪು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಯಾವುದೇ ತರ ಡಿಮ್ಯಾಂಡ್ ಮಾಡಬಾರದು. ಸಮರ್ಪಕವಾಗಿ ಕೆಲಸ ಮಾಡಿಕೊಡಬೇಕು. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಭ್ರಷ್ಟಾಚಾರ ರಹಿತ ಆಡಳಿತದ ಕಡೆಗೆ ಗಮನ ಹರಿಸಬೇಕು ಎಂದರು.ಈ ಅಹವಾಲು ಸ್ವೀಕಾರ ಸಭೆಯಲ್ಲಿ ತಾಪಂ ಇಒ ನಿಂಗಪ್ಪ ಮಸಳಿ, ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ, ಲೋಕಾಯುಕ್ತ ಇಲಾಖೆ ವಿಜಯ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಪಂ ಪಿಡಿಒಗಳು ಇದ್ದರು.