ಮುಡಾ ಆಯುಕ್ತರ ನಿವಾಸದಲ್ಲಿ ಡಿಜಿಟಲ್ ಸಾಕ್ಷಿ ನಾಶ ಶಂಕೆ

| Published : Sep 11 2024, 01:04 AM IST

ಮುಡಾ ಆಯುಕ್ತರ ನಿವಾಸದಲ್ಲಿ ಡಿಜಿಟಲ್ ಸಾಕ್ಷಿ ನಾಶ ಶಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ 8 ಸಿಸಿಟಿವಿ ಕ್ಯಾಮರಾಗಳು ಹಾಗೂ ಡಿವಿಆರ್ ಅನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಸಂಬಂಧ ಅಧಿಕಾರಿಗಳು ಡಿಜಿಟಲ್ ಸಾಕ್ಷಿ ನಾಶಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.ಮೈಸೂರಿನ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ ಸಿಸಿಟಿವಿ ಕ್ಯಾಮರಾ ಹಾಗೂ ಡಿವಿಆರ್ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನ ಮೂಡಿದೆ. ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ 8 ಸಿಸಿಟಿವಿ ಕ್ಯಾಮರಾಗಳು ಹಾಗೂ ಡಿವಿಆರ್ ಅನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು, ಹಿಂದಿನ ಆಯುಕ್ತರು ಅವುಗಳನ್ನು ಕೊಂಡೊಯ್ದಿರುವ ಬಗ್ಗೆ ಅನುಮಾನ ಶುರುವಾಗಿದೆ.ಹಿಂದಿನ ಆಯುಕ್ತರು ಕಚೇರಿಗಿಂತ ಹೆಚ್ಚಾಗಿ ಇದೇ ನಿವಾಸದಲ್ಲಿ ಹೆಚ್ಚು ಕಾರ್ಯ ನಿರ್ವಹಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಿಂದಿನ ಆಯುಕ್ತರು ಡೆವಲಪರ್ ಗಳು ಸೇರಿ ಹಲವರನ್ನು ಮನೆಗೆ ಕರೆಸಿಕೊಂದು ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ.50:50 ಅನುಪಾತ, ಬದಲಿ ನಿವೇಶನ, ತುಂಡು ಭೂಮಿ ಸೇರಿದಂತೆ ಹಲವು ವ್ಯವಹಾರಗಳಿಗೆ ಈ ಅಧಿಕೃತ ನಿವಾಸ ಕೇಂದ್ರ ಬಿಂದು ಆಗಿದ್ದು, ಇದೆಲ್ಲಕ್ಕೂ ಸಿಸಿಟಿವಿ ಕ್ಯಾಮರಾಗಳು ಸಾಕ್ಷಿಯಂತಿದ್ದವು. ಆದರೆ, ಈಗ ಡಿವಿಆರ್ ಸಹಿತ ಸಿಸಿ ಕ್ಯಾಮೆರಾಗಳನ್ನು ಕೊಂಡೊಯ್ದಿರುವ ಬಗ್ಗೆ ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮೇಲೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಡಿಎ ಈಗಿನ ಆಯುಕ್ತ ರಘುನಂದನ್ ಅವರು, ಸಿಸಿಟಿವಿ ಕ್ಯಾಮರಾಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಎಂಡಿಎ ಆಯುಕ್ತರ ಅಧಿಕೃತ ನಿವಾಸದ ನವೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.