ತಾಲೂಕಿನ ಮಿರ್ಲೆ ಸಮೀಪದ ಕುಪ್ಪೆ ಬೋರೆ ಗ್ರಾಮದ 55 ವರ್ಷದ ನಾಗೇಶ್
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಜೀವನ ನಡೆಸಲು ತೆಂಗಿನಮರ ಏರಿ ಕಾಯಿ ಕೀಳುವ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿ ಅದೇ ತೆಂಗಿನ ಮರದಿಂದ ಬಿದ್ದು ಶಾಶ್ವತವಾಗಿ ಎರಡು ಕಾಲುಗಳನ್ನು ಕಳೆದುಕೊಂಡು ಎರಡು ವರ್ಷ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ವೈದ್ಯರು ಇವರಿಗೆ ವಿಕಲಚೇತನ ಪ್ರಮಾಣಪತ್ರ ನೀಡದ ಪರಿಣಾಮ ಈ ವ್ಯಕ್ತಿ ಇಂದಿಗೂ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.ತಾಲೂಕಿನ ಮಿರ್ಲೆ ಸಮೀಪದ ಕುಪ್ಪೆ ಬೋರೆ ಗ್ರಾಮದ 55 ವರ್ಷದ ನಾಗೇಶ್ ಎಂಬವರೆ ಸರ್ಕಾರದ ಸವಲತ್ತಿನಿಂದ ವಂಚಿತರಾದವರಾಗಿದ್ದಾರೆ.
ಜೀವನ ನಿರ್ವಹಣೆಗೆ ತೆಂಗಿನಮರ ಏರಿ ಕಾಯಿ ಕೀಳುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ನಾಗೇಶ್ ಕಳೆದ ಎರಡು ವರ್ಷಗಳ ಹಿಂದೆ ಕಾಯಿಕೀಳಲು ಮರ ಹತ್ತಿದ ಸಂದರ್ಭ ಆಯತಪ್ಪಿ ಬಿದ್ದು, ಸೊಂಟದಿಂದ ಕಾಲಿನ ಕೆಳ ಭಾಗದ ಸ್ವಾಧೀನ ಕಳೆದುಕೊಂಡಿದ್ದರು.ಗಾಯಗೊಂಡು ಆಸ್ಪತ್ರೆ ಸೇರಿದ್ದ ಇವರಿಗೆ ಸಂಬಂಧಪಟ್ಟ ವೈದ್ಯರು ಚಿಕಿತ್ಸೆ ನೀಡಿದರೂ ಸೊಂಟ ಮತ್ತು ಕಾಲು ಸ್ವಾಧೀನಕ್ಕೆ ಬರಲಿಲ್ಲ. ಪರಿಣಾಮ ಇದ್ದ ಕೆಲಸ ಇಲ್ಲದಂತಾಗಿ ನಾಗೇಶ್ ಮನೆಯಲ್ಲಿ ಮೂಲೆ ಹಿಡಿಯುವಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಪತ್ನಿ ಲಕ್ಷ್ಮೀ ಆಸರೆಯಲ್ಲಿ ಜೀವನ ಕಳೆಯುತ್ತಿರುವ ನಾಗೇಶ್ ಹತ್ತು ಹಲವಾರು ಭಾರಿ ತನಗೆ ವಿಶೇಷ ವಿಕಲಚೇತನರ ಪ್ರಮಾಣಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಲಾಗಿದ್ದು, ಯಾವುದೆ ಆದಾಯವಿಲ್ಲದ ಈ ಕುಟುಂಬದಲ್ಲಿ 49 ವರ್ಷ ವಯಸ್ಸಿನ ಪತ್ನಿ ಲಕ್ಷ್ಮೀ ಕೂಲಿಮಾಡಿ ಬಂದ ಹಣದಲ್ಲಿ ಪತಿ, ಪತ್ನಿ ಜೀವನ ನಡೆಸುತ್ತಿದ್ದು, ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಅಂಗವಿಕಲತೆ ಕುಟುಂಬಕ್ಕೆ ತುಂಬಾ ಬಾರವಾಗಿದೆ.ಸೊಂಟ ಕಾಲು ಸ್ವಾಧೀನವಿಲ್ಲದ ಕಾರಣ ಇತ್ತ ವೃತ್ತಿಯೂ ಇಲ್ಲದೆ ಅತ್ತ ಎಲ್ಲಾದರೂ ಹೋಗಲು ಯಾರ ನೆರವಿಲ್ಲದೆ, ನೆರವಿದ್ದರೂ ಎಲ್ಲಿಹೋದರೂ ವಿಕಲಚೇತನರ ಪ್ರಮಾಣಪತ್ರ ಕೇಳುವುದರಿಂದ ಸವಲತ್ತುಗಳಿಂದ ವಂಚಿತರಾಗಿ ಜೀವನ ನಿರ್ವಹಣೆ ಮಾಡುದೆ ದುಸ್ಥರವಾಗಿದೆ.
ಹಲವು ಸಮಸ್ಯೆಗಳು ಎದುರಾದಾಗ ಕಳೆದ ಒಂದೂವರೆ ವರ್ಷದಿಂದ ಐದಾರು ಬಾರಿ ಅಲೆದಾಡಿ ಅರ್ಜಿ ಸಲ್ಲಿಸಿದರೂ ತಾಲೂಕು ಆಸ್ಪತ್ರೆ ವೈದ್ಯರಾಗಲೀ, ಜಿಲ್ಲಾ ಸರ್ಕಾರಿ ವೈದ್ಯರಿಂದಾಗಲೀ, ವಿಶೇಷಚೇತನರ ಪ್ರಮಾಣಪತ್ರ ದೊರೆಯದ ಕಾರಣ ಯಾವುದೇ ಸೌಲಭ್ಯವಿಲ್ಲದೆ ವಂಚಿತರಾಗಿ ಪತ್ನಿ ಆಸರೆಯಲ್ಲಿಯೆ ಜೀವನ ನಿರ್ವಹಣೆ ಮಾಡುವಂತಾಗಿದೆ.ನಾಗೇಶ್ರ ಸದ್ಯದ ಪರಿಸ್ಥತಿಯನ್ನು ಕಂಡ ಗ್ರಾಮದ ಮುಖಂಡ ಎಂ.ಎಲ್. ಧನಂಜಯ ನಾಗೇಶ್ ಗೆ ಸಹಾಯ ಹಸ್ತ ಚಾಚುವಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೆ ಕ್ರಮ ಕೈಗೊಂಡು ವಿಕಲಚೇತನ ಪ್ರಮಾಣಪತ್ರದೊಂದಿಗೆ ಸರಕಾರಿ ಸೌಲಭ್ಯವನ್ನು ಈ ಕುಟುಂಬಕ್ಕೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
----------------ನಾನು ಆರೋಗ್ಯವಾಗಿದ್ದಲ್ಲಿ ಕುಟುಂಬದ ನಿರ್ವಹಣೆ ನಾನೆ ಮಾಡುತ್ತಿದ್ದೆ ಆದರೆ ನಾನು ಓಡಾಡುವುದಿರಲಿ ಕೂರುವುದೇ ಕಷ್ಟದ ಕೆಲಸವಾಗಿದ್ದು, ನನ್ನ ಪತ್ನಿ ಕೂಲಿ ಮಾಡಿ ತಂದ ಹಣದಲ್ಲಿ ಜೀವನ ನಡೆಸುವಂತಾಗಿದೆ. ನನಗೆ ಬಂದಂತಹ ಪರಿಸ್ಥಿತಿ ಬೇರೆ ಯಾರಿಗೂ ಬರುವುದು ಬೇಡ ಈಗಲಾದರೂ ನನ್ನ ಕಡೆ ನೋಡಿ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಲೀ ಸಹಕಾರ ನೀಡಿದರೆ ಸಹಾಯವಾಗುತ್ತದೆ.
-ನಾಗೇಶ್, ಕುಪ್ಪೆ ಬೋರೆ.------------
ಫೋಟೋ- 22ಎಂವೈಎಸ್ 62---
ನನಗೆ ಇವರು ಇಲ್ಲಿಯತನಕ ಯಾವುದೇ ಮಾಹಿತಿ ಇಲ್ಲ, ಈಗ ನನ್ನ ಗಮನಕ್ಕೆ ಬಂದಿದೆ, ಕೂಡಲೆ ವಿಕಲಚೇತನರ ಪ್ರಮಾಣಪತ್ರದೊಂದಿಗೆ ವಿಕಲಚೇತನ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಕೊಡಿಸುವ ಕೆಲಸ ಮಾಡುತ್ತೇನೆ.-ಕಾಟ್ನಾಳ್ ಎಲ್. ಹೇಮಂತ್ ಕುಮಾರ್, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ತಾಲೂಕು ಸಂಯೋಜಕ.