ಕುಡಿವ ನೀರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಸಲಹೆ

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಬೀಳದೆ ಬರ ಪರಿಸ್ಥಿತಿ ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತಿದ್ದು, ರೈತರು, ಕೃಷಿಕರು ಹಾಗೂ ಕೂಲಿಕಾರ್ಮಿಕರು ಕಂಗಲಾಗಿದ್ದಾರೆ. ನಗರ ಸೇರಿದಂತೆ ಗ್ರಾಮೀಣರಿಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳು ಮತ್ತು ಅಧಿಕಾಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಪಂ ಪಿಡಿಒಗಳು ತಂತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಬೋರ್ ವೆಲ್‌ಗಳನ್ನು ರಿಬೋರ್ ಮತ್ತು ದುರಸ್ತಿ ಮಾಡಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಈ ಕಾರ್ಯವನ್ನು ತಕ್ಷಣ ಕೈಗೊಂಡು ಯಾವುದೇ ಗ್ರಾಮದಲ್ಲಿ ಕುಡಿವ ನೀರಿಗೆ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಜಾನುವಾರುಗಳಿಗೂ ಮೇವು ಮ್ತತು ಕುಡಿವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದಲ್ಲಿ ಗೋಶಾಲೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಸರಿಯಾಗಿ ಕೆಲಸ ಮಾಡದ ವಾಟರ್ ಮ್ಯಾನ್‌ಗನ್ನು ಕೆಲಸದಿಂದ ಬಿಡುಗಡೆ ಮಾಡಿ, ಅವರ ಮನೆಯಲ್ಲಿ ಹುಡುಗರು ಇದ್ದರೆ ನೇಮಿಸಿ ಕೊಳ್ಳಿ ಎಂದು ಸಲಹೆ ನೀಡಿದರು.


ವಿಬಿ ಜಿಆರ್‌ಎಎಂಜಿ ದಾಖಲಾತಿಗಳಲ್ಲಿ ಬೋಗಸ್ ಅಥವಾ ಅಕ್ರಮ ಕಂಡು ಬಂತರೆ ಸಂಬಂಧಪಟ್ಟ ಸಿಬ್ಬಂದಿ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ರಾಜಣ್ಣ ಎಚ್ಚರಿಸಿದರು. ಕಂದಾಯ ವಸೂಲಿ ಜೊತೆಗೆ ಎಸ್ಐಆರ್‌ಗೆ 1,42 318 ಜನರು ಈಗಾಗಲೇ ದಾಖಲಿಸಿದ್ದು, ಈ ಕಾರ್ಯವನ್ನು ನಿಖರವಾಗಿ ಪೂರ್ಣಗೊಳಿಸಬೇಕು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು. ಸಾರ್ವಜನಿಕರು ಸಹ ಇದಕ್ಕೆ ಸಹಕರಿಸಬೇಕು ಎಂದು ನಿರ್ದೇಶನ ನೀಡಿದರು.

ತಾಲೂಕಿನಲ್ಲಿ ಅಗತ್ಯವಿರುವಲ್ಲಿ ಚೆಕ್ ಡ್ಯಾಂ ಮಾಡಿ ರೈತರ ಸಮಸ್ಯೆ ಬಗಹೆರಿಸಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ಬಾವಿ, ಬೋರ್ ವೆಲ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸಿ ಗೋಟೂರು ಶಿವಪ್ಪ, ಡಿಎಸ್ಪಿ ಮಂಜುನಾಥ್, ತಹಸೀಲ್ದಾರ್ ನಂದಿನಿ, ಇಓ ಉತ್ತಮ್ ಸೇರಿದಂತೆ ವಿವಿಧ ಇಲಾಖೆಯಗಳ ಅಧಿಕಾರಿಗಳು ಇದ್ದರು.