ಚಡಚಣ ತಾಲೂಕಿನ ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹಾವಿನಾಳ ದತ್ತ ಇಂಡಿಯನ್ ಸಕ್ಕರೆ ಕಾರ್ಖಾನೆಗಳ ಮೇಲೆ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ನೇತೃತ್ವದ ತಂಡ ಭೇಟಿ ನೀಡಿ ತೂಕ ಮತ್ತು ರಿಕವರಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಡಚಣ

ತಾಲೂಕಿನ ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹಾವಿನಾಳ ದತ್ತ ಇಂಡಿಯನ್ ಸಕ್ಕರೆ ಕಾರ್ಖಾನೆಗಳ ಮೇಲೆ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ನೇತೃತ್ವದ ತಂಡ ಭೇಟಿ ನೀಡಿ ತೂಕ ಮತ್ತು ರಿಕವರಿ ಪರಿಶೀಲನೆ ನಡೆಸಿದರು.

ನಂತರ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ, ರೈತರ ಮುಖಂಡರ ಸಮ್ಮುಖದಲ್ಲಿ ಎರಡು ಸಕ್ಕರೆ ಕಾರ್ಖಾನೆ ತೂಕ ಮತ್ತು ರಿಕವರಿ ಪರಿಶೀಲನೆ ಮಾಡಿದಾಗ ಯಾವುದೇ ರೀತಿಯ ತೊಂದರೆ ಕಂಡು ಬರಲಿಲ್ಲ. ಮುಂದಿನ ದಿನಗಳಲ್ಲಿ ಕಾರ್ಖಾನೆಗಳು ಸರಿಯಾದ ದಾಖಲೆ ಮಾಹಿತಿ ಒದಗಿಸುವಲ್ಲಿ ಕ್ರಮ ವಹಿಸಬೇಕು. ಕಾರ್ಖಾನೆಗೆ ಅಧಿಕಾರಿಗಳು, ರೈತರು ಬಂದಾಗ ಸಿಬ್ಬಂದಿ ಬೇಕಾದ ಮಾಹಿತಿ ಒದಗಿಸಬೇಕು. ಜತೆಗೆ ಸಹಕಾರದಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿ, ಮುಂದಿನ ದಿನದಲ್ಲಿ ಕಾರ್ಖಾನೆಗಳ ಮೇಲೆ ಆಗಾಗ ಭೇಟಿ ತೂಕ, ರಿಕವರಿ, ದಾಖಲೆಗಳು ಪರಿಶೀಲನೆ ಮಾಡಲಾಗುವುದು. ದೈನಂದಿನ ದಾಖಲೆಗಳು ಶಿಸ್ತಿನಿಂದ ಪಾಲನೆ ಮಾಡಬೇಕು ಎಂದರು.

ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ, ಅಬಕಾರಿ ನಿರೀಕ್ಷಕ ರಾಹುಲ್‌ ನಾಯಕ, ಪಿಎಸ್‌ಐ ಮಂಜುನಾಥ ತಿರಕನವರ, ಆಹಾರ ನಿರೀಕ್ಷಕ ಶಿವಾನಂದ ಕೋಳಿ, ದಯಾನಂದ ಚೌಗುಲೆ, ರೇಣುಕಾ ಪಟ್ಟಣಶೆಟ್ಟಿ, ಗುರುಶಾಂತ ಬಿರಾದಾರ, ವಿಠ್ಠಲ ಕೋಳಿ, ಕಾರ್ಖಾನೆ ಸಿಬ್ಬಂದಿ ಇದ್ದರು.

ತೂಕ ಪರಿಶೀಲನೆ: ಮರಗೂರ ಶ್ರಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹಾವಿನಾಳ ದತ್ತ ಇಂಡಿಯನ್ ಸಕ್ಕರೆ ಕಾರ್ಖಾನೆಗಳ ಮೇಲೆ ಭೇಟಿ ವೇಳೆ 100, 200, 500, 1000 ಕೀ ಗ್ರಾಂ ಹಾಗೂ ತುಂಬಿದ ಕಬ್ಬಿನ ಗಾಡಿ ತೂಕ ಪರಿಶೀಲನೆ ಮಾಡಲಾಯಿತು. 265, 86032 ಎರಡು ತಳಿ ಕಬ್ಬಿನ ರಿಕವರಿ ಪರಿಶೀಲನೆ ಮಾಡಿದಾಗ ಸರಾಸರಿ ರಿಕವರಿ 9.70 ಕಂಡುಬಂದಿದೆ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ ಒಟ್ಟು 3,27.452 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ, ಈ ವರ್ಷ ನಿನ್ನೆಯವರಗೆ 1,99,098 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ.