ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆಅಸ್ಕಿ, ಬೆಕಿನಾಳ ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಅಸ್ಕಿ ಕೆರೆಯಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಅಂತ್ಯಗೊಂಡಿದೆ.
ತಹಶಿಲ್ದಾರ ಕೀರ್ತಿ ಚಾಲಕ, ಕೆಬಿಜೆಎಲ್ಎಲ್ ಅಧಿಕಾರಿಗಳಾದ ಇಇ ಎಸ್.ಎನ್, ಬಂಡಿವಡ್ಡರ್, ಸೆಕ್ಷನ್ ಆಫೀಸರ್ ಪ್ರವೀಣ ಗುಡಗುಂಟಿ ಅವರ ಭೇಟಿ ನೀಡಿ, ಬೇಡಿಕೆ ಈಡೇರಿಕೆಗೆ ಭರವಸೆ ನೀಡಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇರುವುದರಿಂದ ಜೂನ್೬ರ ನಂತರ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಗಳು, ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಧಿಕೃತವಾಗಿ ಯಾವ ರೀತಿ ಈ ೩ ಕೆರೆಗಳನ್ನು ತುಂಬಿಸಬೇಕು ಎಂದು ತಜ್ಞರಿಂದ ಸಮೀಕ್ಷೆ ಮಾಡಿಸಿ ನಂತರ ಒಂದು ನಿರ್ಣಯಕ್ಕೆ ಬರಬಹುದು ಎಂದು ಹೋರಾಟಕ್ಕೆ ಕುಳಿತ ರೈತರಿಗೆ ತಹಶಿಲ್ದಾರ ಚಾಲಕ ಅವರು ಮನವರಿಕೆ ಮಾಡಿದರು. ಅಲ್ಲದೇ ಎಲ್ಲ ರೈತರ ಹಿತಕಾಯುವ ಕೆಲಸ ಅಧಿಕಾರಿಗಳದ್ದಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಪ್ರಯತ್ನಶೀಲರಾಗಿ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ತಾಲೂಕು ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಮಾತನಾಡಿ, ತಹಶಿಲ್ದಾರರ ಅವರ ಮಾತಿಗೆ ಗೌರವ ಕೊಡುತ್ತೇವೆ. ಕೂಡಲೇ ಅಧಿಕಾರಿಗಳೊಡನೆ ಚರ್ಚಿಸಿ ಒಂದು ದಿನಾಂಕವನ್ನು ನಿರ್ಣಯ ಮಾಡಿ ಆಗ ಅಸ್ಕಿ, ಬೆಕಿನಾಳ, ಬೂದಿಹಾಳ ಪಿ.ಟಿ ಗ್ರಾಮದ ಹಿರಿಯ ರೈತ ಮುಖಂಡರೊಡನೆ ಸಭೆಗೆ ಬಂದು ಶಾಶ್ವತವಾದ ತಿರ್ಮಾನಕ್ಕೆ ಬರೋಣ. ಪ್ರತಿವರ್ಷ ಬೇಸಿಗೆಯಲ್ಲಿ ಈ ಕೆರೆಗಳಿಗೆ ತಪ್ಪದೇ ನೀರು ತುಂಬಿಸುವಂತಾಗಬೇಕು ಎಂದರು.ಈ ಸಮಯದಲ್ಲಿ ಅಸ್ಕಿ ರೈತ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ, ರೈತ ಸಂಘದ ತಾ. ಉಪಾಧ್ಯಕ್ಷ ಗೌಡಪ್ಪಗೌಡ ಹಳಿಮನಿ, ಡಾ.ಪ್ರಭುಗೌಡ ಬಿರಾದಾರ, ಉಪಾಧ್ಯಕ್ಷ ಶರಣಗೌಡ ಬಿರಾದಾರ, ತಾಲೂಕು ಸಂಚಾಲಕ ಮಹಿಬೂಬ ಗೊಬ್ಬರಡಗಿ, ಗ್ರಾಪಂ ಉಪಾಧ್ಯಕ್ಷ ಅಯ್ಯಪ್ಪ ಮುಗಳಿ, ರಾಮನಗೌಡ ಚೌದ್ರಿ, ಮಲ್ಲಪ್ಪ ಅಂಗಡಿ, ಮುತ್ತು ಹೂಗಾರ, ಗುರನಗೌಡ ಬಿರಾದಾರ, ಮಂಜು ಪಡಶೆಟ್ಟಿ, ಮಹದೇವಪ್ಪ ಮಾದರ, ವೆಂಕಣ್ಣ ಗುತ್ಯಾಳ, ಬಸವರಾಜ ಹಡಪದ, ಶಾಂತಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಪ್ರಭುಗೌಡ ಹಳಿಮನಿ, ಶಂಕರ ಮಗದಾಳ, ದೇವಿಂದ್ರ ತುರಕನಗೇರಿ, ಬೆಕಿನಾಳ ಗ್ರಾಮದ ದೇವಿಂದ್ರಪ್ಪಗೌಡ ಪಾಟೀಲ, ಶ್ರೀಶೈಲ ಸಜ್ಜನ, ಮಲ್ಲಪ್ಪ ಮುದನೂರ, ಶ್ರೀಶೈಲ ಹಿರೇಮಠ, ರಾಮನಗೌಡ ಕರಕಳ್ಳಿ, ಲಕ್ಷ್ಮಣ ಚಲವಾದಿ, ಮರಲಿಂಗಪ್ಪ ನಾಟಿಕಾರ, ಮಡಿವಾಳಪ್ಪ ಸಜ್ಜನ, ಬೂದಿಹಾಳ ಗ್ರಾಮದ ಬಸನಗೌಡ ಪಾಟೀಲ, ಸಂತೋಷ ಕುಳಗೇರಿ, ಭೀಮನಗೌಡ ಬಿರಾದಾರ, ಶರಣಪ್ಪ ಹಯ್ಯಾಳ, ಜಟ್ಟೆಪ್ಪ ಮಾದರ ಸೇರಿದಂತೆ ಅನೇಕರು ಇದ್ದರು.