ಹೊಸಕೋಟೆ: ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಪಾರದರ್ಶಕವಾಗಿ ಪರಿಹಾರ ಒದಗಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಹಲವಾರು ರೀತಿಯ ಸಮಸ್ಯೆಗಳನ್ನ ಹೊತ್ತು ಅಧಿಕಾರಿಗಳ ಬಳಿಗೆ ಬರುತ್ತಾರೆ. ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಸುತ್ತಾಡಿಸಬಾರದು. ಅವರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಿ ಕೆಲಸ ಮಾಡಿಕೊಡಬೇಕು. ತಾಲೂಕಿನಲ್ಲಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು ಎಂದರು.

ಬಹುತೇಕ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳು ವ್ಯಾಪಕವಾಗಿ ಇರುತ್ತವೆ. ಅಧಿಕಾರಿಗಳು ನಾಗರಿಕರಿಗೆ ಸರ್ಕಾರಿ ರೀತಿನೀತಿಗಳನ್ನು ತಿಳಿಸಬೇಕು. ಅದನ್ನು ಬಿಟ್ಟು ನಿರ್ಲಕ್ಷ್ಯ ಹಾಗೂ ಬೇಜಬ್ದಾರಿತನದ ಉತ್ತರ ಹೇಳಬಾರದು ಎಂದು ಸೂಚಿಸಿದರು.

ಜನಸ್ಪಂದನ ಸಭೆಯಲ್ಲಿ ಒಟ್ಟು 73 ಅಹವಾಲುಗಳನ್ನು ಶಾಸಕ ಶರತ್ ಬಚ್ಚೇಗೌಡರಿಗೆ ಸಲ್ಲಿಸಿದರು. ಮುಂದಿನ ಸೋಮವಾರ ಮತ್ತೆ ಸಭೆ ನಡೆಸಲಿದ್ದು ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಿರಬೇಕು. ಇಲ್ಲವಾದರೆ ಸೂಕ್ತ ಕಾರಣ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಶೀತಲ್, ತಾಪಂ ಇಒ ಮುನಿಯಪ್ಪ, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.


ಫೋಟೋ : 15 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕು ಕಚೇರಿಯಲ್ಲಿ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ಕುಂದುಕೊರತೆಗಳ ಅಹವಾಲು ಸಲ್ಲಿಸಿದರು.