ಸಾರಾಂಶ
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊಂಬುಜ ಕ್ಷೇತ್ರದಲ್ಲಿ ಜೈನ ಮಠದ ಸಹಯೋಗದಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಭಾಷೆ-ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹೊಸನಗರ
ಇಪ್ಪತ್ತನೆಯ ಶತಮಾನದಲ್ಲಿ ಕವಿಗಳು, ವಿದ್ವಾಂಸರು ಹಳೆಗನ್ನಡ ಸಾಹಿತ್ಯದ ಅಧ್ಯಯನ ಮಾಡುತ್ತಿದ್ದರು. ಸಂಶೋಧನೆ ಮಾಡುತ್ತಿದ್ದರು. ಶಿಕ್ಷಕರು ಮಕ್ಕಳಿಗೆ ಅದನ್ನು ರಸವತ್ತಾಗಿ ಕಲಿಸುತ್ತಿದ್ದರು. ಇವತ್ತು ಹಳೆಗನ್ನಡ ಕಲಿಕೆಗೆ ಉಪೇಕ್ಷೆ ಮಾಡುತ್ತಿರುವುದು ಸರಿಯಲ್ಲ ಎಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆ, ಹೊಂಬುಜ ಕ್ಷೇತ್ರದಲ್ಲಿ ಜೈನ ಮಠದ ಸಹಯೋಗದಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಭಾಷೆ-ಸಾಹಿತ್ಯ ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯಪುಸ್ತಕ ತೂಕ ಕಡಿಮೆ ಮಾಡಲು ಹೋಗಿ ಹಳೆಗನ್ನಡ ಸಾಹಿತ್ಯಕ್ಕೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ಹಳೆಗನ್ನಡ ಸಾಹಿತ್ಯ ಒಂದು ಪುಟಕ್ಕೆ ಸೀಮಿತವಾಗಿದೆ. ಕನ್ನಡ ಸಾಹಿತ್ಯ ಪರಿಣಾಮ ಕಾರಿಯಾಗಿ ಬೋಧನೆ ಮಾಡಲು ಇಂತಹ ರಸಗ್ರಹಣ ಶಿಬಿರದ ಅಗತ್ಯ ಬಹಳವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಡಾ.ಎಸ್.ಪಿ.ಪದ್ಮಪ್ರಸಾದ್ ಅವರು ಮಾತನಾಡಿ, ಶಿಕ್ಷಕರು ಪಾಠದ ಸಾಹಿತ್ಯವನ್ನು ಚನ್ನಾಗಿ ಅರ್ಥ ಮಾಡಿಕೊಂಡು ಮಕ್ಕಳ ಮನಸ್ಸಿಗೆ ದಾಟಿಸಬೇಕು. ಅಲ್ಲಿ ನಿಮ್ಮ ಅನುಭವ, ಅಭಿರುಚಿ ಮುಖ್ಯ ವಾಗುತ್ತದೆ. ವಿದ್ಯಾರ್ಥಿಗೆ ಅರ್ಥವಾಗುವುದಕ್ಕಿಂತ ಅನುಭವ ಆಗುವಂತೆ ಬೋಧಿಸುವ ಕಲೆ ರೂಪಿಸಿಕೊಳ್ಳಲು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕನ್ನಡ ಭಾಷೆ ಮಕ್ಕಳಿಂದ ಸರಿಯಾಗಿ ಓದು, ಬರೆಯುವ ವಾತಾವರಣ ನೋಡಿದಾಗ ಕಲಿಸುವಲ್ಲಿನ ಕೊರತೆ ಮನವರಿಕೆ ಯಾಗುತ್ತಿದೆ. ಆ ಬಗ್ಗೆ ನಾವೆಲ್ಲರೂ ಕೂಡಿ ಯೋಚಿಸಬೇಕಿದೆ. ಈ ರಸಗ್ರಹಣ ಶಿಬಿರ ಮಾರ್ಗಸೂಚಿಯಾಗಲಿ ಎಂದರು.ಹೊಸನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಆರ್.ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಎಂ.ಜಯಶೀಲ, ಡಾ.ಶಾಂತಾರಾಮ್ ಪ್ರಭು, ಬಿ.ಚಂದ್ರೇಗೌಡ ವಿವಿಧ ವಿಚಾರವಾಗಿ ಮಾರ್ಗದರ್ಶನ ಮಾಡಿದರು.
ಹೊಸನಗರ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ.ಎನ್.ಡಿ.ಹೆಗಡೆ, ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಎಸ್.ವಿರೇಶ್ ವೇದಿಕೆಯಲ್ಲಿದ್ದರು.