ಸಾರಾಂಶ
ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ ಪುಸ್ತಕ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಪುಸ್ತಕವನ್ನು ಅನಾವರಣಗೊಳಿಸುವರು.
ಕನ್ನಡಪ್ರಭ ವಾರ್ತೆ ಉಡುಪಿ
ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ, ದಿನೇಶ ಉಪ್ಪೂರ ವಿರಚಿತ, ‘ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗೃಹದಲ್ಲಿ ಜೂನ್ 29ರಂದು ಲೋಕಾರ್ಪಣೆಗೊಳ್ಳಲಿದೆ.ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಪುಸ್ತಕವನ್ನು ಅನಾವರಣಗೊಳಿಸುವರು. ಮಣಿಪಾಲದ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ ಅಧ್ಯಕ್ಷತೆ ವಹಿಸುವರು. ಸಾಮಗರ ಸಹಕಲಾವಿದರಾದ ಡಾ. ಪ್ರಭಾಕರ ಜೋಶಿ ಶುಭಾಶಂಸನೆಗೈಯ್ಯುವರು. ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಪುಸ್ತಕ ಪರಿಚಯ ಮಾಡಲಿರುವರು.
ಮುಖ್ಯ ಅಭ್ಯಾಗತರಾಗಿ ಪ್ರಮೋದ್ ಮಧ್ವರಾಜ್ (ಮಾಜಿ ಸಚಿವರು), ಡಾ. ನಾರಾಯಣ ಸಭಾಹಿತ (ಸಹಕುಲಾಧಿಪತಿಗಳು ಮಾಹೆ), ಪ್ರೊ.ನೀತಾ ಇನಾಂದಾರ್ (ಪ್ರಧಾನ ಸಂಪಾದಕರು, ಮಣಿಪಾಲ ಯುನಿವರ್ಸಲ್ ಪ್ರೆಸ್), ಪ್ರದೀಪ ಕುಮಾರ್ ಕಲ್ಕೂರ್ (ಅಧ್ಯಕ್ಷರು ಕಸಾಪ ದ. ಕ.) ಮತ್ತು ಹಿರಿಯ ಸ್ತ್ರೀವೇಷಧಾರಿ ಡಾ. ಕೋಳ್ಯೂರು ರಾಮಚಂದ್ರ ರಾವ್ ಭಾಗವಹಿಸಲಿರುವರು.ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ ‘ಶಲ್ಯ ಸಾರಥ್ಯ’ವನ್ನು ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಡಾ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್ ಮತ್ತು ವಿ.ಹಿರಣ್ಯ ವೆಂಕಟೇಶ ಭಟ್ ನಡೆಸಿಕೊಡಲಿರುವರು.
ಕಲಾಭಿಮಾನಿಗಳೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಯೋಜಕರಾದ ಎಂ.ಎಲ್. ಸಾಮಗರು ವಿನಂತಿಸಿಕೊಂಡಿದ್ದಾರೆ.