ಫೆ.11ರಂದು ರಾಜಯೋಗಿನಿ ಬಿ.ಕೆ. ಶಿವಾನಿ ಮಂಗಳೂರಿಗೆ

| Published : Jan 28 2024, 01:15 AM IST

ಸಾರಾಂಶ

ಮಂಗಳೂರಿನಲ್ಲಿ ಬ್ರಹ್ಮಕುಮಾರಿ ಶಿವಾನಿ ಅವರದ್ದು ಇದು 3ನೇ ಕಾರ್ಯಕ್ರಮ. ಈ ಹಿಂದೆ 2020ರ ಫೆ.8ರಂದು ಪ್ರವಚನ ನೀಡಿದ್ದರು. ಇದೀಗ ಜನತೆಯ ಬಹು ಕೋರಿಕೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದ ಉನ್ನತ ನಾಗರಿಕ ಪ್ರಶಸ್ತಿಯಾದ ‘ನಾರಿ ಶಕ್ತಿ’ ಪುರಸ್ಕೃತೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಕಿ, ವಿಶ್ವವಿಖ್ಯಾತ ಪ್ರವಚನಕಾರರಾದ ರಾಜಯೋಗಿನಿ ಬ್ರಹ್ಮಕುಮಾರಿ ಶಿವಾನಿ ಅವರು ಫೆ.11ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಅವರು ‘ಸರಳತೆ ಮತ್ತು ಅನುಗ್ರಹಯುಕ್ತ ಜೀವನ ಜೀವಿಸುವ ಕಲೆ’ಯ ಕುರಿತು ಪ್ರವಚನ ನೀಡಲಿದ್ದಾರೆ ಎಂದು ಮಂಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವಿಶ್ವೇಶ್ವರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಂಗಳೂರಿನಲ್ಲಿ ಬ್ರಹ್ಮಕುಮಾರಿ ಶಿವಾನಿ ಅವರದ್ದು ಇದು 3ನೇ ಕಾರ್ಯಕ್ರಮ. ಈ ಹಿಂದೆ 2020ರ ಫೆ.8ರಂದು ಪ್ರವಚನ ನೀಡಿದ್ದರು. ಇದೀಗ ಜನತೆಯ ಬಹು ಕೋರಿಕೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ಪ್ರವೇಶವಿದೆ. ಆದರೆ ಮುಂಚಿತವಾಗಿ ನೋಂದಣಿ ಮಾಡಬೇಕು ಮತ್ತು ಪ್ರವೇಶ ಪತ್ರ ಹೊಂದಿರಬೇಕು. https://services.brahmakumaris.com/form/12215 ಲಿಂಕ್‌ ಮೂಲಕ ನೋಂದಣಿ ಮಾಡಬೇಕು. ಸ್ವ-ಇಮೇಲ್‌ ಐಡಿ ಹಾಕುವುದು ಕಡ್ಡಾಯ, ಇಮೇಲ್‌ ಇಲ್ಲದಿದ್ದರೆ ಆ ಜಾಗದಲ್ಲಿ nomail@gmail.com ಎಂದು ನಮೂದಿಸಬೇಕು. ಈಗಾಗಲೇ 700ಕ್ಕೂ ಅಧಿಕ ನೋಂದಣಿ ಆಗಿದೆ. ಪ್ರವೇಶ ಪತ್ರವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಉರ್ವ ಸ್ಟೋರ್‌ನಲ್ಲಿರುವ ಕೇಂದ್ರದಿಂದ ಪಡೆದುಕೊಳ್ಳಬಹುದು. ಈ ಬಗ್ಗೆ ಮೊಬೈಲ್ : 9742366999, 9916699911 ಸಂಪರ್ಕಿಸಬಹುದು.ವಿಶ್ವವಿದ್ಯಾಲಯದ ಬಿ.ಕೆ. ರೇವತಿ, ಬಿ.ಕೆ. ಜಯಶ್ರೀ, ಬಿ.ಕೆ. ಸ್ನೇಹಾ, ಬಿ.ಕೆ. ಅಂಬಿಕಾ ಇದ್ದರು.ಪ್ರೇರಣಾದಾಯಿ ಉಪನ್ಯಾಸ: ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ವಿಧಾನದ ಕುರಿತ ಬ್ರಹ್ಮಕುಮಾರಿ ಶಿವಾನಿ ಅವರ ಉಪನ್ಯಾಸಗಳು ಸಾಮಾಜಿಕ ಜಾಲತಾಣಗಳಲ್ಲಿ 110 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿವೆ. ಫೇಸ್ ಬುಕ್‌ನಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಾರ್ವಜನಿಕ ಸಂವಾದಗಳು, ಕಾರ್ಯಾಗಾರಗಳು, ಸೆಮಿನಾರ್, ಕಾರ್ಪೊರೇಟ್ ತರಬೇತಿಗಳು, ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳು ಇತ್ಯಾದಿ ವೈವಿಧ್ಯಮಯ ವೇದಿಕೆಗಳ ಮೂಲಕ ಲಕ್ಷಾಂತರ ಜನರ ಜೀವನಕ್ಕೆ ಪ್ರೇರಣೆಯಾಗಿದ್ದಾರೆ. ಭಾರತವಲ್ಲದೆ, ಯೂರೋಪ್, ಏಷ್ಯಾ ಪೆಸಿಫಿಕ್, ಆಫ್ರಿಕಾ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲೂ ಪ್ರವಚನ ನೀಡಿದ್ದಾರೆ. ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಪುಣೆ ವಿವಿಯಿಂದ 1994ರಲ್ಲಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿರುವ ಬಿ.ಕೆ. ಶಿವಾನಿ, ನಂತರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಪ್ರಸ್ತುತ ದೆಹಲಿ ನಿವಾಸಿಯಾಗಿದ್ದಾರೆ.