ರಾಜ್ಯದ ನಾನಾ ಜಿಲ್ಲೆಗಳಲ್ಲಿ ‘ನಾನೂ ಕಾಫಿರ’ ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಆದರೆ, ಮೊದಲ ಕಾರ್ಯಕ್ರಮವನ್ನು ನನ್ನ ತವರು ಜಿಲ್ಲೆ ಮಂಡ್ಯದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಕೃತಿ ಧರ್ಮ, ಸಹಜ ನ್ಯಾಯ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕಾಫಿರ ಸಿದ್ಧಾಂತ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಚನೆಯಾಗಿರುವ ‘ನಾನೂ ಕಾಫಿರ’ ಸಂಶೋಧನಾ ಕೃತಿಯ ಲೋಕಾರ್ಪಣೆ ಸಮಾರಂಭ ನಗರದಲ್ಲಿ ಫೆ.೭ರಂದು ನಡೆಯಲಿದೆ ಎಂದು ಸಂವಿಧಾನ ವಿಶ್ಲೇಷಕ, ಕೃತಿಯ ಕರ್ತೃ ಡಾ.ಸುಧಾಕರ ಹೊಸಳ್ಳಿ ತಿಳಿಸಿದರು.

‘ನಾನೂ ಕಾಫಿರ’ ಕೃತಿಯು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹಿಂದುತ್ವ ಕಥನವಾಗಿದೆ. ಕೃತಿಯಲ್ಲಿನ ಪ್ರತಿ ವಿಷಯ ಮತ್ತು ಘಟನೆಗಳಿಗೆ ಸಂಬಂಧಿಸಿದಂತೆ ಅಂಬೇಡ್ಕರ್ ಪ್ರತಿಪಾದನೆಯ ಅಂಶಗಳನ್ನು ದಾಖಲೆಗಳ ಸಹಿತ ಉಲ್ಲೇಖಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ವರಾಷ್ಟ್ರ ಪ್ರಕಾಶನವು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಈ ಸಮಾರಂಭವು ಅಂದು ಬೆಳಗ್ಗೆ ೧೦.೩೦ಕ್ಕೆ ಆರಂಭಗೊಳ್ಳಲಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಮಾರಂಭ ಉದ್ಘಾಟಿಸುವರು. ಜೊತೆಗೆ ‘ನಾನೂ ಕಾಫಿರ’ ಕೃತಿಯನ್ನು ಲೋಕಾರ್ಪಣೆ ಮಾಡಿ, ಕೃತಿ ಕುರಿತು ವಿಶ್ಲೇಷಣೆ ಮಾಡುವರು ಎಂದು ವಿವರಿಸಿದರು.

ಇದೇ ವೇಳೆ ಸ್ವರಾಷ್ಟ್ರ ಪ್ರಕಾಶನ ಸಂಸ್ಥೆಯ ಉದ್ಘಾಟನೆಯೂ ನಡೆಯಲಿದ್ದು, ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನವಾಗಿರುವ ಪುಸ್ತಕ ಮನೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಅಂಕೇಗೌಡ ಅವರನ್ನು ಸನ್ಮಾನಿಸಲಾಗುವುದು. ಮೈಸೂರು-ಕೊಡಗು ಸಂಸದ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು ಎಂದರು.

ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥಗಳ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಸ್ವರಾಷ್ಟ್ರ ಪ್ರಕಾಶನ ಸಂಸ್ಥೆಯ ಮಹಾಪೋಷಕ ಮತ್ತು ಚಂದ್ರಶೇಖರ ದಡದಪುರ ಭಾಗವಹಿಸುವರು ಎಂದರು.

ರಾಜ್ಯದ ನಾನಾ ಜಿಲ್ಲೆಗಳಲ್ಲಿ ‘ನಾನೂ ಕಾಫಿರ’ ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಆದರೆ, ಮೊದಲ ಕಾರ್ಯಕ್ರಮವನ್ನು ನನ್ನ ತವರು ಜಿಲ್ಲೆ ಮಂಡ್ಯದಲ್ಲಿ ಆಯೋಜಿಸಲಾಗಿದೆ ಎಂದರು.

ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಪದ್ಮನಾಭ, ವಿಭಾಗ ಪ್ರಭಾರಿ ಬಿ.ಎಸ್. ಅನುಪಮಾ ಗೋಷ್ಠಿಯಲ್ಲಿದ್ದರು.