ಸತತ ಪ್ರಯತ್ನದಲ್ಲಿದ್ದರೆ ಗುರಿ ತಲುಪಲು ಸಾಧ್ಯ: ನಂಜುಂಡಪ್ಪ

| Published : Jan 17 2024, 01:51 AM IST

ಸಾರಾಂಶ

ತುಮಕೂರಿನ ಸಿದ್ಧಾರ್ಥ ಕಾಲೇಜಿನಲ್ಲಿ ‘ಗಾನ ಕಲಾ ಸಂಭ್ರಮ -28’ರ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಒಳ್ಳೆ ಅಭ್ಯಾಸ ರೂಢಿಸಿಕೊಂಡು ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಬಿ. ನಂಜುಂಡಪ್ಪ ಕರೆ ನೀಡಿದರು

ನಗರದ ಶ್ರೀ ಸಿದ್ದಾರ್ಥ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಚಟುವಟಿಕೆಗಳ ‘ಗಾನ ಕಲಾ ಸಂಭ್ರಮ -28’ರ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಕಷ್ಟ. ಆದರೆ ಅದನ್ನು ಕೈ ಬಿಡದೆ ಸತತ ಪ್ರಯತ್ನದಲ್ಲಿದ್ದರೆ ಗುರಿ ತಲುಪಲು ಸಾಧ್ಯ. ಸಮಾಜ ಎಂದರೆ ತರತರಹದ ಮಾನವ ಗುಣಗಳು ಇರುತ್ತವೆ. ಜಾತಿ-ಜನಾಂಗ, ಧರ್ಮದ ಬೇದ-ಭಾವ ಇಲ್ಲದೆ ಐಕ್ಯತೆಗೆ ನಾವು ಹೊಂದಿಕೊಳ್ಳಬೇಕು ಎಂದರು.

ಏಕಾಗ್ರತೆ, ಭಾವಶುದ್ಧಿ, ತನ್ವಯತೆ ಇವೆಲ್ಲವೂ ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಆಗಲು ಸಾಧ್ಯ. ಎಷ್ಟೇ ಹಣ, ಆಸ್ತಿ, ಸಂಪತ್ತು ಇದ್ದರು ನೆಮ್ಮದಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕುಣಿಗಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಗೋವಿಂದರಾಯ ಎಂ ಮಾತನಾಡಿ, ಅವರು ಸೋಲು ಗೆಲುವಿನ ಮೆಟ್ಟಿಲು. ಸಂಗೀತ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಆಸಕ್ತಿದಾಯಕ ಪಠ್ಯದಲ್ಲಿ ನಾವು ತೊಡಗಿ ಉನ್ನತ ಸ್ಥಾನಕ್ಕೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಯಾವ ರೀತಿ ಹೇಗೆ ಸ್ಪರ್ಧಿಸಬೇಕು ಹಾಗೂ ಯಾವ ರೀತಿ ಹಾಡಬೇಕೆಂದು ಸ್ಪರ್ಧಿಸಿದ ಸ್ಪರ್ಧಿಗಳೆಲ್ಲರೂ ಆತ್ಮವಿಶ್ವಾಸದಿಂದ ಸ್ಪರ್ಧಿಸಬೇಕು ಎಂದು ಗಮಕಿ ಸೀತಾ ಲಕ್ಷ್ಮಿ ಶರ್ಮ ತಿಳಿಸಿದರು.

ಪ್ರಾಂಶುಪಾಲರಾದ ಡಾ. ಹೇಮಲತಾ .ಪಿ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದರು ಚನ್ನರಾಯಪಟ್ಟಣ ಶಿವ ಶಂಕರಪ್ಪ ಜಿಎಸ್, ಪ್ರೊ. ಹನುಮಂತರಾಯಪ್ಪ ಜಿ, ಸಹ ಆಡಳಿತಾಧಿಕಾರಿಗಳಾದ ಕೆ.ಎಚ್. ಖಲಂದರ ಪಾಷ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಪ್ರೊ. ರಮೇಶ್ ಮಣ್ಣೆ ಹಾಗೂ ಬೋಧಕರು-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಜನಪದಗೀತೆ, ಭಾವಗೀತೆ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.