ಸಾರಾಂಶ
ಶಿವಮೊಗ್ಗ: ಹೊಂಗಿರಣ ತಂಡದಿಂದ ಜೂ.9 ರಂದು ಸಂಜೆ 7 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಉಡುಪಿಯ ಪ್ರಜ್ಞಾನಂ ಟ್ರಸ್ಟ್ನ ಖ್ಯಾತ ನೃತ್ಯಪಟು ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸಿರುವ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕವನ್ನು ಆಯೋಜಿಸಲಾಗಿದೆ ಎಂದು ಹೊಂಗಿರಣ ತಂಡದ ಮುಖ್ಯಸ್ಥ ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಟಕವನ್ನು ನಾವು ಖ್ಯಾತ ಕಲಾವಿದ, ಸಂಗೀತಗಾರ ಕೊಂಡಯ್ಯದಾಸ್ ಇವರ ಸಹಾಯಾರ್ಥ ನಡೆಸುತ್ತಿದ್ದು, ಕೊಂಡಯ್ಯನವರಿಗೆ ಹೃದಯ ಮತ್ತು ಬೆನ್ನು ಹುರಿಯ ಸಮಸ್ಯೆಯಿಂದ ಸಹಾಯಕರಿಲ್ಲದೆ ನಡೆದಾಡುವುದೂ ಕಷ್ಟವಾಗಿದೆ ಎಂದರು.ಇಂತಹ ಸ್ಥಿತಿಯಲ್ಲಿ ಅವರು ತಮ್ಮ ಕುಟುಂಬವನ್ನು ನಿರ್ವಹಿಸಬೇಕಿದೆ. ಶಿವಮೊಗ್ಗದ ಹಲವು ತಂಡಗಳ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಕೊಂಡಯ್ಯನವರು ಹಲವು ಬೀದಿನಾಟಕ ತಂಡಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಂತವರು ಸಂಕಷ್ಟದಲ್ಲಿ ಇರುವುದರಿಂದ ಈ ನಾಟಕದಲ್ಲಿ ಬಂದ ಹಣದ ಜೊತೆ ತಂಡದಿಂದಲೂ ಒಂದಷ್ಟು ಸಹಾಯ ನೀಡುವ ಯೋಜನೆ ಇದೆ ಎಂದರು.
ನಾಟಕಕ್ಕೆ 50 ರು. ಹಾಗೂ 100 ರು.ಗಳ ಟಿಕೆಟ್ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಬಂದು ನಾಟಕವನ್ನು ವೀಕ್ಷಿಸುವುದರ ಜೊತೆಗೆ ಕಲಾವಿದರ ಕುಟುಂಬಕ್ಕೆ ನೆರವಾಗುವಂತೆ ಕೋರಿದರು.ಈ ನಾಟಕದ ರಚನೆಯನ್ನು ಸುಧಾ ಆಡುಕಳ ರಚಿಸಿದ್ದು, ಗಣೇಶ್ರಾವ್ ನಿರ್ದೇಶನ ಮಾಡಿದ್ದಾರೆ. ಈ ನಾಟಕವು ಪ್ರಮುಖವಾಗಿ ಹೊಯ್ಸಳ ದೊರೆ ವಿಷ್ಣುವರ್ಧನನ ಪಟ್ಟದರಸಿಯಾಗಿದ್ದ ನಾಟ್ಯರಾಣಿ ಶಾಂತಲೆಯ ಚಿತ್ರಣವಿದೆ. ನೃತ್ಯದ ಭಂಗಿಗಳು ಅಭಿವ್ಯಕ್ತಿಯ ಸಂಕೇತವಾಗಿ ಕಾಣಿಸಿಕೊಳ್ಳುತ್ತವೆ. ಒಂದು ಹೊಸ ಅನುಭವದ ಜಗತ್ತನ್ನು ಇದು ತಾಗುತ್ತದೆ. ಇದರಲ್ಲಿ ಅಭಿನಯಿಸಿರುವ ಸಂಸ್ಕೃತಿ ಪ್ರಭಾಕರ್ರವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ. ಮಾಡೆಲ್ ಆಗಿಯೂ ಇವರು ಕೆಲಸ ಮಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಹೊಂಗಿರಣ ತಂಡದ ಪ್ರಮುಖರಾದ ರವಿ, ಗಿರಿಧರ್ ಉಪಸ್ಥಿತರಿದ್ದರು.